ಹಾವೇರಿ: ಇಂದಿನ ಆಧುನಿಕ ಯುಗದಲ್ಲಿ ಬಹುತೇಕರು ಮೊಬೈಲ್ ದಾಸರಾಗಿದ್ದಾರೆ. ನಿಂತರೆ, ಕುಳಿತರೆ, ಮಲಗಿದರೆ, ಎಲ್ಲ ಸಂದರ್ಭದಲ್ಲೂ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ವಾಹನ ಚಾಲನೆ ಸಂದರ್ಭದಲ್ಲಿ ಹಲವರು ಮೊಬೈಲ್ ಬಳಕೆ ಮಾಡುತ್ತಿದ್ದು, ಇವರ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸವಾರರು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳ ಜೀವಕ್ಕೂ ಕುತ್ತು ಬರುತ್ತಿದೆ.
‘ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು’ ಎಂಬುದಾಗಿ ಸಂಚಾರಿ ನಿಯಮ ರೂಪಿಸಲಾಗಿದೆ. ಆದರೆ, ಹಾವೇರಿ ಜಿಲ್ಲೆಯಾದ್ಯಂತ ಈ ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಚಾಲಕರು ಹಾಗೂ ಸವಾರರು, ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದಾರೆ. ಇದನ್ನು ತಡೆಯಬೇಕಾದ ಪೊಲೀಸರು, ಮೌನವಾಗಿದ್ದಾರೆ.
ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ನಿತ್ಯವೂ ಸಾವಿರಾರೂ ವಾಹನಗಳು ಸಂಚರಿಸುತ್ತಿವೆ. ಹಳೇ ಪಿ.ಬಿ.ರಸ್ತೆ, ಗುತ್ತಲ ರಸ್ತೆ, ಎಂ.ಜಿ.ರಸ್ತೆ, ಹಾನಗಲ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರವಿರುತ್ತದೆ. ಈ ರಸ್ತೆಗಳಲ್ಲಿ ಚಾಲಕರು ಹಾಗೂ ಸವಾರರು, ನಿರಂತರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವ ಜೊತೆಯಲ್ಲಿ, ಪಾದಚಾರಿಗಳ ಜೀವಕ್ಕೂ ಸಂಚಕಾರ ತರುತ್ತಿದ್ದಾರೆ. ಇಂಥವರ ವರ್ತನೆಯಿಂದ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಹಳೇ ಪಿ.ಬಿ.ರಸ್ತೆಯಲ್ಲಿ ಸುತ್ತಾಡುವ ದ್ವಿಚಕ್ರ ವಾಹನಗಳ ಸವಾರರ ಪೈಕಿ, ಹಲವರು ಮೊಬೈಲ್ನಲ್ಲಿ ಮಾತನಾಡುತ್ತ ಸವಾರಿ ಮಾಡುತ್ತಿದ್ದಾರೆ. ಮುಂದೆ ಹೋಗುವ ಹಾಗೂ ಹಿಂದೆ ಬರುವ ವಾಹನಗಳ ಜ್ಞಾನವಿಲ್ಲದೇ ತಮ್ಮದೇ ಗುಂಗಿನಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ಸವಾರಿ ಮಾಡುತ್ತಿದ್ದಾರೆ. ಈ ಪೈಕಿ ಹಲವರು ಮಾರ್ಗಮಧ್ಯೆ ಅಪಘಾತವನ್ನುಂಟು ಮಾಡುತ್ತಿದ್ದು, ಹಲವು ಪ್ರಕರಣಗಳು ಸ್ಥಳದಲ್ಲಿಯೇ ಸಂಧಾನವಾಗುತ್ತಿವೆ. ಸವಾರರ ವರ್ತನೆ ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಜನರ ಜೀವಕ್ಕೆ ಅಪಾಯ ಉಂಟಾಗುವ ಸಂಭವ ಹೆಚ್ಚಿದೆ.
ಕಾರು, ಆಟೊ, ಲಾರಿ ಸೇರಿದಂತೆ ಇತರೆ ವಾಹನಗಳ ಚಾಲಕರ ಪೈಕಿ ಹಲವರು, ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದಾರೆ. ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುತ್ತಿದ್ದಾರೆ.
ಹಾವೇರಿ ಮಾತ್ರವಲ್ಲದೇ ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಬಹುತೇಕರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಇಂಥವರ ವರ್ತನೆಗಳಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದೇವೆ.
ಮೊಬೈಲ್ನಲ್ಲಿ ಹೆಚ್ಚು ಮಾತನಾಡುವ ಬೈಕ್ ಸವಾರರು: ‘ಹಾವೇರಿ ನಗರದ ಬಹುತೇಕ ರಸ್ತೆಗಳಲ್ಲಿ ಬೈಕ್ಗಳು ಹೆಚ್ಚಾಗಿ ಓಡಾಡುತ್ತವೆ. ಈ ಪೈಕಿ ಹಲವರು, ಮೊಬೈಲ್ನಲ್ಲಿ ಮಾತನಾಡುತ್ತಲೇ ಬೈಕ್ ಚಲಾಯಿಸಿಕೊಂಡು ಹೋಗುತ್ತಾರೆ. ಇಂಥವರಿಗೆ ಬುದ್ದಿವಾದ ಹೇಳಲು ಹೋದರೆ, ನಮ್ಮ ಮೇಲೆಯೇ ಹರಿಹಾಯುತ್ತಾರೆ. ಕೇಳಲು ನೀನ್ಯಾರು ? ಎಂದು ಜಗಳ ತೆಗೆಯುತ್ತಾರೆ’ ಎಂದು ಎಂ.ಜಿ.ರಸ್ತೆ ವ್ಯಾಪಾರಿ ರಮಣ್ ಹೇಳಿದರು.
‘ಮೊಬೈಲ್ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ನಮ್ಮ ಸಂಬಂಧಿಯೊಬ್ಬರು ಮೃತಪಟ್ಟಿದ್ದಾರೆ. ಅವರಿಗೆ ಬಂದ ಸ್ಥಿತಿ ಬೇರೆಯವರಿಗೆ ಬರಬಾರದೆಂದು ಬುದ್ದಿವಾದ ಹೇಳುತ್ತಿದ್ದೇನೆ. ಆದರೆ, ಜನರು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅಪಘಾತದಲ್ಲಿ ಸತ್ತರೆ, ಅವರ ಕುಟುಂಬದವರ ಗತಿ ಏನಾಗಬಹುದೆಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಹಳೇ ಪಿ.ಬಿ.ರಸ್ತೆಯ ಹೋಟೆಲ್ವೊಂದರ ಸಿಬ್ಬಂದಿ ರಾಘವೇಂದ್ರ, ‘ಕೆಲದಿನಗಳ ಹಿಂದೆಯಷ್ಟೇ ನಮ್ಮ ಹೋಟೆಲ್ ಎದುರು ಅಪಘಾತವಾಯಿತು. ಮೊಬೈಲ್ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ, ಅಜ್ಜಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆಸಿದ್ದ. ಇದರಿಂದಾಗಿ ಅಜ್ಜಿ ಕುಸಿದು ಬಿದ್ದಿದ್ದರು. ಸ್ಥಳೀಯರೇ ಅಜ್ಜಿಯನ್ನು ಆರೈಕೆ ಮಾಡಿದರು. ಅದೃಷ್ಟವಶಾತ್ ಅಜ್ಜಿಗೆ ಹೆಚ್ಚು ಪೆಟ್ಟಾಗಿರಲಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.