ADVERTISEMENT

ಹಿರೇಕೆರೂರು: ತಲೆಕೆಳಗಾದ ಕಸದ ತೂಗು ಬುಟ್ಟಿಗಳು

ಕಸ ಮುಕ್ತವಾಗದ ಹಿರೇಕೆರೂರು ಪಟ್ಟಣ; ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 5:29 IST
Last Updated 10 ನವೆಂಬರ್ 2022, 5:29 IST
ಹಿರೇಕೆರೂರು ಪಟ್ಟಣ ಪ್ರವಾಸಿ ಮಂದಿರ ಬಳಿ ಇರುವ ತೂಗುವ ಕಸದ ಬುಟ್ಟಿಯನ್ನು ಕಸವನ್ನು ಹಾಕದಂತೆ ಕಿತ್ತು ಗೋಡೆಗೆ ನಿಲ್ಲಿಸಿರುವುದು  -ಪ್ರಜಾವಾಣಿ ಚಿತ್ರ
ಹಿರೇಕೆರೂರು ಪಟ್ಟಣ ಪ್ರವಾಸಿ ಮಂದಿರ ಬಳಿ ಇರುವ ತೂಗುವ ಕಸದ ಬುಟ್ಟಿಯನ್ನು ಕಸವನ್ನು ಹಾಕದಂತೆ ಕಿತ್ತು ಗೋಡೆಗೆ ನಿಲ್ಲಿಸಿರುವುದು  -ಪ್ರಜಾವಾಣಿ ಚಿತ್ರ   

ಹಿರೇಕೆರೂರು: ಪಟ್ಟಣದ ರಸ್ತೆಗಳನ್ನು ಕಸ ಮುಕ್ತಗೊಳಿಸುವ ಉದ್ದೇಶದಿಂದ ಪಟ್ಟಣದ ಹಲವೆಡೆ ಕಸದಬುಟ್ಟಿಗಳನ್ನು ಅಳವಡಿಸಿದ್ದು ತೂಗುವ ಕಸದಬುಟ್ಟಿಗಳು ಕೆಲವೆಡೆ ತುಕ್ಕು ಹಿಡಿದಿವೆ. ಇನ್ನೂ ಕೆಲವಡೆ ಕಸ ಹಾಕುತ್ತಾರೆ ಎಂದು ಬೀದಿಬದಿ ವ್ಯಾಪಾರಿಗಳು ಕಸದ ಬುಟ್ಟಿಗಳನ್ನು ತಲೆಕೆಳಗಾಗಿ ಮಾಡಿದ್ದಾರೆ.

ಪಟ್ಟಣ ಪಂಚಾಯ್ತಿಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪಟ್ಟಣದ 35 ಕಡೆ ಸುಮಾರು ₹3 ಲಕ್ಷ ಖರ್ಚು ಮಾಡಿ ತೂಗುವ ಕಸದ ಬುಟ್ಟಿಗಳನ್ನು ಹಾಕಲಾಗಿತ್ತು. ಬಸವೇಶ್ವರನಗರ, ಉಪ್ಪಾರ ಓಣಿ, ಸರ್ವಜ್ಞ ವೃತ್ತ, ದುರ್ಗಾದೇವಿ ಮಹಾದ್ವಾರ ಹತ್ತಿರ ಕಸವನ್ನು ಎಲ್ಲೆಂದರಲ್ಲಿ ಕಸವನ್ನು ಹಾಕಲಾಗುತ್ತದೆ. ಕಸದ ಬುಟ್ಟಿಯನ್ನು ತಲೆ ಕೆಳಗಾಗಿ ಮಾಡಿರುವ ಕಾರಣ ಕಸವನ್ನು ಹಾಕಲು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ಇದರಿಂದಾಗಿ ಪಟ್ಟಣ ನೋಡುವ ಹಾಗಿಲ್ಲ. ರಸ್ತೆಯ ಅಕ್ಕಪಕ್ಕ ಹಾದು ಹೊರಟರೆ ದುರ್ನಾತವೋ ದುರ್ನಾತ. ಬಡಾವಣೆ, ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ತೊಟ್ಟಿಗಳನ್ನು ಕಂಡಾಗ ಬಹುತೇಕರು ಬೇಸರದಿಂದ ಹೇಳುವ ಮಾತುಗಳು. ಕಸದ ಬುಟ್ಟಿಗಳು ಕಸಕ್ಕೆ ಬಳಕೆಯಾಗದೇ ಹಲವು ಬುಟ್ಟಿಗಳು ತುಕ್ಕು ಹಿಡಿದಿದ್ದರೆ, ಇನ್ನೂ ಕೆಲವೆಡೆ ಕಿಡಿಗೇಡಿಗಳ ಹಾವಳಿಗೆ ಹಾಳಾಗಿವೆ.

ADVERTISEMENT

ಕಸದ ಬುಟ್ಟಿಗಳು ನಾಪತ್ತೆ:

ಪಟ್ಟಣದ ಪ್ರವಾಸಿ ಮಂದಿರ ಪ್ರದೇಶದ ಮುಂಭಾಗದಲ್ಲಿ ಅಳವಡಿಸಿರುವ ಎರಡ್ಮೂರು ತೂಗು ಕಸದ ಬುಟ್ಟಿಗಳನ್ನು ಕಿತ್ತು ಬೋರಲು ಇಡಲಾಗಿದೆ. ಅದೇ ಮಾರ್ಗದಲ್ಲಿ ಇರಿಸಿದ್ದ ಕಸದ ಬುಟ್ಟಿ ನಾಪತ್ತೆಯಾಗಿದೆ. ಒಂದೊಂದು ಕಸದ ಬುಟ್ಟಿಗೆ ಸುಮಾರು ₹20,000 ವೆಚ್ಚವಾಗಿದೆ. ಆದರೆ ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದ ಸರಿಯಾಗಿ ನಿರ್ವಹಣೆ ಮಾಡದೆ ಕಸದ ಬುಟ್ಟಿಗಳು ಕಿತ್ತು ಹೋಗಿವೆ. ಅಲ್ಲದೆ ಪಾದಚಾರಿ ಮಾರ್ಗದ ಮೇಲೆ ಇರುವ ಅಂಗಡಿಯವರು ಸಹ ಕಸದ ಬುಟ್ಟಿಗಳನ್ನು ತೆಗೆದು ಇಟ್ಟಿದಾರೆ.

ಪಟ್ಟಣ ಪಂಚಾಯ್ತಿ ನಿರ್ಲಕ್ಷ್ಯ:

ಪಟ್ಟಣ ಪಂಚಾಯ್ತಿಯ ಪ್ರತಿನಿತ್ಯ ಅಧಿಕಾರಿಗಳು ಸರ್ವಜ್ಞ ವೃತ್ತ ಮುಖಾಂತರ ಕಚೇರಿಗಳಿಗೆ ತೆರೆಳುತ್ತಾರೆ ಆದರೆ ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಾಗೂ ಕಸವನ್ನು ಹಾಕದಂತೆ ತಲೆಕೆಳಗಾಗಿ ಮಾಡಿರುವ ಕಸದ ಡಬ್ಬಿಗಳನ್ನು ನೋಡಿಯೂ ಸಹ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಪ್ರತಿ ದಿನ ಸುಮಾರು 7 ಟನ್ ಕಸ ಉತ್ಪಾದನೆ ಆಗುತ್ತಿದ್ದು ಪಟ್ಟಣ ಪಂಚಾಯ್ತಿಯು ಎರಡೂ ದಿನಕ್ಕೆ ಒಮ್ಮೆ ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸುತ್ತಿದೆ.

'ಸ್ವಚ್ಛ ತಾ ಸೇವಾ' ಅಭಿಯಾನದಲ್ಲಿ ಹಾವೇರಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದು, ಪ್ರಶಸ್ತಿಗೆ ಭಾಜನವಾಗಿದೆ. ಆದರೆ ಈ ಅಭಿಯಾನ ಕೇವಲ ಪ್ರಶಸ್ತಿಗೆ ಮಾತ್ರ ಸೀಮಿತನಾ ಎಂಬ ಪ್ರಶ್ನೆ ಮೂಡುತ್ತಿದೆ. ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಧಿಕಾರಿಗಳು ಹಿರೇಕೆರೂರು ಪಟ್ಟಣ ಪಂಚಾಯ್ತಿಯ ಕಡೆ ಗಮನ ಹರಿಸಬೇಕು’ ಎಂದು ಹಿರೇಕೆರೂರು ನಿವಾಸಿಸುರೇಶ್ ಒತ್ತಾಯಿಸಿದರು.

‘ಕಸದ ಸಮಸ್ಯೆ ಬಗೆಹರಿಸಲು ಕ್ರಮ’

ಜನರ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತಿದೆ. ಅಲ್ಲದೆ ಪಟ್ಟಣದಲ್ಲಿರುವ ಕಸದ ಬುಟ್ಟಿಗಳನ್ನು ಕಾಪಾಡಿಕೊಳ್ಳಬೇಕು. ರಿಪೇರಿ ಇದ್ದರೆ ಅವುಗಳನ್ನು ಕೂಡಲೇ ಸರಿಪಡಿಸುತ್ತೇವೆ. ಎಲ್ಲೆಲ್ಲಿ ಕಸದ ಬುಟ್ಟಿಯ ಸಮಸ್ಯೆಯಾಗಿದೆಯೋ ಅಲ್ಲಿಗೆ ನಮ್ಮ ಆರೋಗ್ಯ ನಿರೀಕ್ಷಕರನ್ನು ಕಳುಹಿಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ’ ಎಂದುಹಿರೇಕೆರೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.