ಮೈಸೂರು: ಅತ್ಯಾಚಾರ ಸಂತ್ರಸ್ತೆಯೊಬ್ಬರಿಂದ, ಇಲ್ಲಿನ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಕಾನ್ಸ್ಟೆಬಲ್ ಭೀಮಣ್ಣ ₹75 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಸತಿ ಗೃಹವೊಂದರಲ್ಲಿ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
‘ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಬಂಧಿಸಲು ಮೊದಲಿಗೆ ಇನ್ಸ್ಪೆಕ್ಟರ್ ರಾಘವೇಂದ್ರ ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಹಣ ನೀಡಲಿಲ್ಲ. ನಂತರ, ಆರೋಪಿಯು ಜಾಮೀನು ತೆಗೆದುಕೊಂಡ. ದೋಷಾರೋಪ ಪಟ್ಟಿಯಲ್ಲಿ ಕಠಿಣವಾದ ಸೆಕ್ಷನ್ಗಳನ್ನು ಹಾಕಬೇಕಾದರೆ, ಜಾಮೀನು ರದ್ದುಗೊಳಿಸಬೇಕಾದರೆ ಹಣ ನೀಡಲೇಬೇಕು ಎಂದು ಠಾಣೆಯ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈ ಹಂತದಲ್ಲಿ, ಸಂತ್ರಸ್ತೆಯ ಸೋದರ ವಿಷಯವನ್ನು ಎಸಿಬಿ ಗಮನಕ್ಕೆ ತಂದಿದ್ದಾರೆ. ನಗರದ ಹೊರವಲಯದ ವಸತಿ ಗೃಹವೊಂದರಲ್ಲಿ ₹75 ಸಾವಿರ ನೀಡುವಾಗ ಬಂಧಿಸಲಾಯಿತು’ ಎಂದು ಎಸಿಬಿ ಎಸ್ಪಿ ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ, ಇನ್ಸ್ಪೆಕ್ಟರ್ಗಳಾದ ನಿರಂಜನ್ ಮತ್ತು ಕರೀಂ ರಾವ್ಸರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.