ADVERTISEMENT

ತಹಶೀಲ್ದಾರ್‌ ಕಚೇರಿಗೆ ಜೆಡಿಎಸ್‌ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 9:10 IST
Last Updated 26 ಅಕ್ಟೋಬರ್ 2017, 9:10 IST

ಅಫಜಲಪುರ: ಪಟ್ಟಣದ ಮಧ್ಯ ಭಾಗದಲ್ಲಿ ಪ್ರತಿ ಸೋಮವಾರ ಸೇರುವ ಸಂತೆಯನ್ನು ಹೊಸದಾಗಿ ನಿರ್ಮಾಣ ಮಾಡಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕೆಂದು ತಾಲ್ಲೂಕು ಜೆಡಿಎಸ್‌ ಘಟಕದವರು ಬುಧವಾರ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ರಾಜಕುಮಾರ ಬಬಲಾದ ಮಾತನಾಡಿ, ‘ಕಳೆದ 2 ವರ್ಷಗಳಿಂದ ಸಂತೆಯ ಸ್ಥಳಾಂತರಕ್ಕೆ ವಿವಿಧ ರೀತಿಯ ಹೋರಾಟ ಮಾಡಲಾಗಿದೆ. ಕೊನೆಗೆ ತಹಶೀಲ್ದಾರ್‌ ಕುಳಿತುಕೊಳ್ಳುವ ಸ್ಥಳದಲ್ಲಿಯೇ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದರು.

‘ಸಂತೆ ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಮತ್ತು ಪ್ರವಾಸಿ ಮಂದಿರದ ಎದುರುಗಡೆ ವೈನ್‌ಶಾಪ್‌ ಹಾಕಲಾಗಿದೆ. ಅದನ್ನು ತೆರವುಗೊಳಿಸಬೇಕು. ವೈನ್‌ಶಾಪ್‌ನಿಂದ 100 ಮೀ. ಅಂತರದಲ್ಲಿಯೇ ಸರ್ಕಾರಿ ಶಾಲೆಯಿದೆ. ಇದರ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಸಂಜೀವ ಕೊಳಗೇರಿ, ಹನುಮಂತರಾಯ ಬಿರಾದಾರ, ನಾಗಣಗೌಡ ಪಾಟೀಲ, ರಾಜಶ್ರೀ ಸೋನಾರ, ಸಿದ್ದು ಅಳ್ಳಗಿ, ರೇವಣಸಿದ್ದಪ್ಪ ಪಾಟೀಲ, ಸಂಗಮ್ಮ ಕಾಂಬಳೆ, ಅಪ್ಪಾಶಾ, ಸಿದ್ದು ವಿಭೂತಿಹಳ್ಳಿ, ಮಲ್ಲು ಪೂಜಾರಿ ಇದ್ದರು.

ತಹಶೀಲ್ದಾರ್‌ ಪರವಾಗಿ ಶಿರಸ್ತೇದಾರ ಗಾಳೆಪ್ಪ ಮನವಿ ಸ್ವೀಕರಿಸಿ, ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.