ADVERTISEMENT

ದೇಶದ ಚೌಕೀದಾರನೇ ಚೋರ: ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 20:17 IST
Last Updated 18 ಮಾರ್ಚ್ 2019, 20:17 IST
ಕಲಬುರ್ಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ರ‍್ಯಾಲಿಯಲ್ಲಿ ಸ್ಥಳೀಯ ಮುಖಂಡರನ್ನು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಪರಿಚಯಿಸಿದರು –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ
ಕಲಬುರ್ಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ರ‍್ಯಾಲಿಯಲ್ಲಿ ಸ್ಥಳೀಯ ಮುಖಂಡರನ್ನು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಪರಿಚಯಿಸಿದರು –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌.ಜಿ   

ಕಲಬುರ್ಗಿ: ‘ರಫೇಲ್‌ ಯುದ್ಧ ವಿಮಾನ ಒಪ್ಪಂದದಲ್ಲಿ ₹30 ಸಾವಿರ ಕೋಟಿ ಕದ್ದುಸಿಕ್ಕಿ ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ, ಈಗ ಇಡೀ ದೇಶವನ್ನೇ ಕೊಳ್ಳೆ ಹೊಡೆಯಲುಹೊರಟಿದ್ದಾರೆ. ದೇಶದ ಚೌಕೀದಾರನೇ ಚೋರನಾಗಿದ್ದಾನೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರವಾಗ್ದಾಳಿ ನಡೆಸಿದರು.

ಸೋಮವಾರ ಇಲ್ಲಿ ನಡೆದ ‘ಕಾಂಗ್ರೆಸ್‌ ಪರಿವರ್ತನಾ ರ‍್ಯಾಲಿ’ಯಲ್ಲಿ ಪಾಲ್ಗೊಂಡು ಪ್ರಚಾರ ಸಭೆಗೆ ಚಾಲನೆ ನೀಡಿದ ಅವರು, ತಮ್ಮ ಭಾಷಣದುದ್ದಕ್ಕೂ ‘ಚೌಕೀದಾರ್‌ ಚೋರ್‌ ಹೈ’ ಎಂದು ಮೋದಿ ಅವರನ್ನು ಜರಿದರು. ನೆರೆದಿದ್ದ ಜನರಿಂದಲೂ ಅದನ್ನೇ ಹೇಳಿಸಿದರು.

‘ನನ್ನನ್ನು ಪ್ರಧಾನಿ ಮಾಡಿ, ನಿಮ್ಮ ಚೌಕೀದಾರ್‌ ಆಗುತ್ತೇನೆ ಎಂದು ಮೋದಿ ಹೇಳಿದ್ದರು. ಪ್ರಧಾನಿಯಾದ ನಂತರ ಲೂಟಿಕೋರರಿಗೆ ದೇಶದ ಖಜಾನೆಯ ಬಾಗಿಲು ತೆರೆದು ಲೂಟಿ ಮಾಡಲು ನೆರವಾದರು. ದೇಶದ ಚೌಕೀದಾರ್‌ ಆಗುವ ಬದಲು ಲೂಟಿಕೋರರ ಚೌಕೀದಾರ್‌ ಆಗಿ ಕೆಲಸ ಮಾಡಿದರು’ ಎಂದು ಆಪಾದಿಸಿದರು.

ADVERTISEMENT

‘ಮೋದಿ ಆಡಳಿತದಲ್ಲಿ ಎರಡು ಭಾರತ ಉದಯಿಸಿವೆ. ದಯನೀಯ ಸ್ಥಿತಿಯಲ್ಲಿರುವ ಬಡವರದ್ದು ಒಂದು ಭಾರತವಾದರೆ, ಮೋದಿ ಕೃಪಾಕಟಾಕ್ಷದಶ್ರೀಮಂತರದ್ದು ಇನ್ನೊಂದು ಭಾರತ. ಇದುವೇ ಮೋದಿ ಅವರ ಸಾಧನೆ. ಇಂಥ ಭಾರತ ನಮಗೆ ಬೇಡ. ನಮಗೆ ಬೇಕಿರುವುದು ಎಲ್ಲ ವರ್ಗದ ಜನರು ನೆಮ್ಮದಿಯಿಂದಿರುವ ಒಂದೇ ಸುಖೀ ಭಾರತ’ ಎಂದರು.

‘ಗರಿಷ್ಠ ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ರದ್ದು ಮಾಡಿದಂತೆ ಭಾರತೀಯ ಸಂವಿಧಾನವನ್ನೂ ರದ್ದು ಮಾಡುವ ಹುನ್ನಾರವನ್ನು ಆರ್‌ಎಸ್‌ಎಸ್‌, ಬಿಜೆಪಿ ಮಾಡುತ್ತಿವೆ.ಏಕವ್ಯಕ್ತಿ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಮೋದಿ ಯತ್ನಿಸುತ್ತಿದ್ದಾರೆ. ನ್ಯಾಯದಾನ ಮಾಡುವ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳೇ ನ್ಯಾಯ ಕೇಳಿ ಜನರೆದುರು ಬರುವಂತೆ ಮಾಡಿದರು. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದರು. ಇವೆಲ್ಲವೂ ಏಕವ್ಯಕ್ತಿ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಭಾಗವಾಗಿದೆ’ ಎಂದು ಆರೋಪಿಸಿದರು.

ಮೋದಿಪರ ಘೋಷಣೆ; ಲಘು ಲಾಠಿ ಪ್ರಹಾರ
ಬೆಂಗಳೂರು: ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಸೋಮವಾರ ನಡೆದ ಸಂವಾದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬರುತ್ತಿದ್ದಂತೆ, ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಬಿಜೆಪಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಹೊಯ್ ಕೈ ನಡೆಯಿತು.

ನೂಕಾಟ, ತಳ್ಳಾಟ ನಡೆದು ಕೆಲಹೊತ್ತು ಗೊಂದಲ ಉಂಟಾಯಿತು. ಘರ್ಷಣೆ ತಪ್ಪಿಸಲು ಪೊಲೀಸರು ಲಘು ‌ಲಾಠಿ ಪ್ರಹಾರ ನಡೆಸಿದರು. ರಾಹುಲ್‌ ಹೊರಡುವಾಗಲೂ ಕೆಲವು ಟೆಕಿಗಳು ಮೋದಿ ಪರ ಘೋಷಣೆ ಮೊಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.