ಅಫಜಲಪುರ: ತಾಲ್ಲೂಕು ಕೇಂದ್ರದಿಂದ 32 ಕಿ.ಮೀ ಅಂತರವಿರುವ ಬಂದರವಾಡ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾಗಿದ್ದು, ಮಳೆ ಬಂದರೆ ಗ್ರಾಮದಲ್ಲಿ ಜನರು ಸಂಚರಿಸುವುದೇ ಸಾಧ್ಯವಾಗದೇ ಪರದಾಡುವಂತಾಗಿದೆ.
ಗ್ರಾಮದ ಬಸ್ ನಿಲ್ದಾಣ ಸಂಪೂರ್ಣ ಮಳೆಯಿಂದ ಅಸ್ತವ್ಯಸ್ತಗೊಂಡಿದೆ. ಎಲ್ಲಿ ನೋಡಿದರೂ ನೀರು, ಕೆಸರು ಇದ್ದು, ಕಾಲಿಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಒಳರಸ್ತೆಗಳು ಸಹ ಹಾಳಾಗಿದ್ದು, ಅಲ್ಲಲ್ಲಿ ಮಳೆ ನೀರು ನಿಂತು ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.
‘ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಮಳೆ ಬಂದರೆ ಗ್ರಾಮದಲ್ಲಿ ಸಂಚರಿಸುವದೇ ಸಾಧ್ಯವಾಗುತ್ತಿಲ್ಲ ಬಸ್ ನಿಲ್ದಾಣವಂತೂ ತುಂಬಾ ಹಾಳಾಗಿ ಹೋಗಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಮುಖಂಡ ಲಕ್ಷ್ಮಣ ಕಟ್ಟಿಮನಿ ಒತ್ತಾಯಿಸಿದರು.
ರಸ್ತೆ ಸುಧಾರಣೆಗೆ ಆದ್ಯತೆ: ಈ ಭಾಗದಿಂದ ಆಯ್ಕೆಯಾಗಿ ಕಲಬುರ್ಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಶೋಭಾ ಸಿದ್ದು ಶಿರಸಗಿ ಅವರನ್ನು ವಿಚಾರಿಸಿದಾಗ ‘ಬಂದರವಾಡ ಬಸ್ ನಿಲ್ದಾಣ ಮತ್ತು ಸಂತೆ ಕಟ್ಟೆ ಮಳೆಯಿಂದ ಹಾಳಾಗಿ ಹೋಗಿದೆ.
ಎಚ್ಕೆಡಿಬಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ₹30 ಲಕ್ಷ ಹಣ ಇಡಲಾಗಿದೆ ಒಂದು ವಾರದಲ್ಲಿ ಟೆಂಡರ್ ಆಗುತ್ತಿದೆ. ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದು, ಅದನ್ನು ಈಡೇರಿಸಿದ್ದೇವೆ ಎಂದು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.