ಚಿಂಚೋಳಿ: ‘ಹೈದ್ರಾಬಾದ ಕರ್ನಾಟಕದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆಗಳ 5 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಹೈಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಗುರುವಾರ ತಾಲ್ಲೂಕಿನ ಗಣಾಪುರ ಗ್ರಾಮದಲ್ಲಿ ಆರ್ಎಂಎಸ್ಎ ಯೋಜನೆ ಅಡಿಯಲ್ಲಿ ನಿರ್ಮಿಸಿದ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ತಿಂಗಳಾಂತ್ಯಕ್ಕೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
‘ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಈ ಭಾಗದ ಮಕ್ಕಳಿಗೆ ಅತ್ಯುತ್ತಮ ಭವಿಷ್ಯ ವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಪಾಲಕರು ಒಳ್ಳೆಯ ಶಿಕ್ಷಣ ಕೊಡಿಸಲು ಮುಂದಾಗಬೇಕು’ ಎಂದು ತಿಳಿಸಿದರು.
‘ಈಗಾಗಲೇ 18 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸರ್ಕಾರದ ಅವಧಿ ಮುಗಿಯುವುದರ ಒಳಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಇನ್ನೂ 12 ಸಾವಿರ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಲಾಗಿದೆ. ಹೈಕ ಭಾಗದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಹಣಕಾಸು ಇಲಾಖೆಯ ಅನುಮತಿಯ ಅಗತ್ಯವಿಲ್ಲ’ ಎಂದರು.
‘371(ಜೆ) ಜಾರಿಯಾದ ಮೇಲೆ ಈ ಭಾಗದಲ್ಲಿ ಭಾಗ್ಯದ ಬಾಗಿಲು ತೆರೆದಿದೆ. ಎಂಜಿನಿಯರಿಂಗ್ ಸೀಟು 6 ಸಾವಿರ ಹಾಗೂ 750 ವೈದ್ಯಕೀಯ ಸೀಟು ಈ ಭಾಗಕ್ಕೆ ಸಿಗುತ್ತವೆ. ಮೊದಲು ವರ್ಷಕ್ಕೆ 150 ಸೀಟೂ ಸಿಗುತ್ತಿರಲಿಲ್ಲ’ ಎಂದರು.
ಜಿ.ಪಂ ಸದಸ್ಯ ಶಿವಶರಣಪ್ಪ ಶಂಕರ, ನಿವೃತ್ತ ತಹಶೀಲ್ದಾರ್ ಆರ್.ಎಂ. ನಾಟಿ ಕಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಭಾಷ್ಚಂದ್ರ ನಿಷ್ಠಿ, ಸೇಡಂ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರ ರಾವ್, ತಾ.ಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಉಪ ವಿಭಾಗಾಧಿಕಾರಿ ಪರಶುರಾಮ, ತಹಶೀಲ್ದಾರ ದಯಾನಂದ ಪಾಟೀಲ, ಬಿಇಒ ಜನಾರ್ದನರೆಡ್ಡಿ ಪಾಟೀಲ ಇದ್ದರು. ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಾವ್ ಅವರನ್ನು ಸನ್ಮಾನಿಸಲಾಯಿತು. ಮಾರುತಿ ಪತಂಗೆ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.