ADVERTISEMENT

ಕಲ್ಯಾಣ ಕರ್ನಾಟಕಕ್ಕೆ ದೊರೆಯದ ಅವಕಾಶ: ಕುಂ.ವೀರಭದ್ರಪ್ಪ ಅಸಮಾಧಾನ

ಪ್ರಶ್ನಿಸುವವರು ಬೇಕಿಲ್ಲ; ಅದಕ್ಕೇ ಪರಿಗಣಿಸಿಲ್ಲ ಎಂದ ಕುಂವೀ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 17:20 IST
Last Updated 4 ಡಿಸೆಂಬರ್ 2019, 17:20 IST
ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ   

ಕಲಬುರ್ಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕಲ್ಯಾಣ ಕರ್ನಾಟಕದ ಸಾಹಿತಿಗಳನ್ನು ಪರಿಗಣಿಸದೇ ಇರುವುದಕ್ಕೆ ಕಾದಂಬರಿಕಾರ ಕುಂ.ವೀರಭದ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಸರ್ಕಾರಕ್ಕೆ ನೇರವಾಗಿ ಪ್ರಶ್ನಿಸುವ ವ್ಯಕ್ತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದು ಕಸಾಪಕ್ಕೆ ಬೇಕಿಲ್ಲ. ಅದಕ್ಕಾಗಿ ಸಮನ್ವಯ ಕವಿಯನ್ನು ಆಯ್ಕೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗ ಅದನ್ನು ನೇರವಾಗಿ ವಿರೋಧಿಸುವವರು ಕಸಾಪಕ್ಕೆ ಬೇಕಿಲ್ಲ. ಎಂತಹ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗಲೂ ಮುಗುಳ್ನಗುತ್ತಲೇ ಇರುವವರು ಬೇಕಿದೆ. ನನ್ನ ಹಿರಿಯ ಗೆಳೆಯರಾದ ವೆಂಕಟೇಶಮೂರ್ತಿ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸುವೆ. ಅವರು ಹಿರಿಯರ ವಾಕಿಂಗ್‌ಗೆ ಹಿತಾನುಭವ ನೀಡುವ ಪಾರ್ಕ್‌ ಇದ್ದಂತೆ. ನಾವು ಗುಡ್ಡದ ಕುರುಚಲು ಗಿಡಗಳು. ಹೀಗಾಗಿ, ಕಸಾಪ ಆಯ್ಕೆ ಪಾರ್ಕ್‌ ಆಗಿರುತ್ತದೆಯೇ ಹೊರತು ಕುರುಚಲು ಗಿಡಗಳಲ್ಲ’ ಎಂದು ಅವರು
ಪ್ರತಿಕ್ರಿಯಿಸಿದರು.

‘ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ನಡೆಯುವ ಸಮ್ಮೇಳನಗಳಿಗೆ ಈ ಭಾಗದವರನ್ನು ಪರಿಗಣಿಸುವುದೇ ಇಲ್ಲ. ಇಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೂ ಆರು ಜಿಲ್ಲೆಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡದಿದ್ದರೆ ಹೇಗೆ? ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದು
ಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸಾಹಿತ್ಯದಲ್ಲಿಯೂ ಅಸಮಾನತೆಗೆ ಒಳಗಾಗಬೇಕಿದೆ’ ಎಂದು ಸಾಹಿತಿ
ಗಳಾದ ಕೊಪ್ಪಳದ ಡಾ.ಅಲ್ಲಮಪ್ರಭು ಬೆಟದೂರು, ಕಲಬುರ್ಗಿಯ ಸ್ವಾಮಿರಾವ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಳಗನ್ನಡ, ನಡುಗನ್ನಡದ ಶೇ 75ರಷ್ಟು ಸಾಹಿತ್ಯ ಸೃಷ್ಟಿಯಾಗಿದ್ದೇ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ. ರನ್ನ, ಪೊನ್ನ, ಪಂಪ, ಜನ್ನ, ಸರ್ವಜ್ಞ, ದಾಸರು ಈ ಭಾಗಕ್ಕೆ ಸೇರಿದವರು. ಆ ಸಾಹಿತ್ಯ ಸೃಷ್ಟಿಯನ್ನು ಮುಂದುವರಿಸಿಕೊಂಡು ಬಂದವರು ಈಗಲೂ ಇದ್ದಾರೆ. ಇಲ್ಲಿನವರನ್ನು ಆಯ್ಕೆ ಮಾಡದೆ ಕಸಾಪ ಮತ್ತೆ ಮಲತಾಯಿ ಧೋರಣೆ ತಳೆದಿದೆ. ಸಿದ್ದಯ್ಯ ಪುರಾಣಿಕ ಹಾಗೂ ಶಾಂತರಸರು ಮಾತ್ರ ಇಲ್ಲಿ ನಡೆದ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. ಆ ನಂತರ ಮತ್ತೆ ಅವಕಾಶ ಸಿಕ್ಕಿಲ್ಲ’ ಎಂದು ಡಾ.ಅಲ್ಲಮಪ್ರಭು
ಹೇಳಿದರು.

‘ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರು ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ಭಾಗದವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದೆವು. ಆದರೆ, ಸ್ಪಂದನೆ ಸಿಕ್ಕಿಲ್ಲ. ರನ್ನನ ಗದಾಯುದ್ಧದಲ್ಲಿ ಉಲ್ಲೇಖಿಸಿದಂತೆ ಕುರುಕ್ಷೇತ್ರ ಯುದ್ಧದ ಸರತಿ ಬರುವವರೆಗೆ ನಾವು ಕಾಯಲೇಬೇಕಿದೆ’ ಎಂದು ಸ್ವಾಮಿರಾವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.