ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿಯ ಭಾಗ್ಯವಂತಿದೇವಿ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಸುರೇಶ್ (40) ಎಂಬುವವರು ಭೀಮಾ ನದಿಯಲ್ಲಿ ಸ್ನಾನ ಮಾಡುವ ವೇಳೆ ನೀರಿನಲ್ಲಿ ಸೋಮವಾರ ಕೊಚ್ಚಿಕೊಂಡು ಹೋಗಿದ್ದಾರೆ.
ಸಂಜೆಯವರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ.
ಪತ್ನಿ ಪದ್ಮಪ್ರಿಯಾ ಮತ್ತು ಮಗಳು ನೇಹಾ ಜೊತೆ ಘತ್ತರಗಿಗೆ ಬಂದಿದ್ದ ಸುರೇಶ್ ಅವರು ದೇವಿ ದರ್ಶನಕ್ಕೂ ಮೊದಲು ಭೀಮಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಪತ್ನಿ, ಮಗಳು ನದಿ ದಡದ ಕಲ್ಲಿನ ಮೇಲೆ ಕುಳಿತಿದ್ದರೆ ಸತೀಶ್ ಸ್ನಾನ ಮಾಡಲೆಂದು ನದಿಗೆ ಇಳಿದಾಗ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಇತ್ತೀಚೆಗೆ ನದಿಗೆ ಹರಿಸಿದ್ದರಿಂದ ಭೀಮಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ, ಪತ್ತೆ ಕಾರ್ಯಾಚರಣೆ ಸವಾಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.