
ಅಫಜಲಪುರ: ಪಟ್ಟಣದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯು ಸುಮಾರು 10 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಮಾರುಕಟ್ಟೆಯ ಕಟ್ಟಡ, ಪರಿಕರಣಗಳು ಹಾಳಾಗಿವೆ.
ಸರ್ಕಾರ ರೈತರಿಗೆ ಅನುಕೂಲಕ್ಕೆ ಬೃಹತ್ ಪ್ರಮಾಣದ ಕೃಷಿ ಮಾರುಕಟ್ಟೆ, ತೂಕ ಯಂತ್ರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ವಹಿವಾಟು ನಡೆಯದ ಕಾರಣ ಮಾರುಕಟ್ಟೆ ನಾಯಿ, ಹಂದಿಗಳ ವಾಸಸ್ಥಾನ ಅಲ್ಲದೇ ಅನೈತಿಕ ಕೆಲಸಗಳ ತಾಣವಾಗಿ ಮಾರ್ಪಟ್ಟಿದೆ.
‘ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಸುವಂತೆ 2 ವರ್ಷಗಳಿಂದ ಸಾಕಷ್ಟು ಹೋರಾಟ ಮಾಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಜೆಡಿಎಸ್ ಮುಖಂಡ ರಾಜಕುಮಾರ್ ಬಡದಾಳ.
‘ಸೋಮವಾರದ ಸಂತೆ ಪಟ್ಟಣದ ಹಳೆಯ ಪಂಚಾಯಿತಿ ಸುತ್ತಮುತ್ತ ನಡೆಯುತ್ತಿದೆ. ಈ ಸಂತೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ವರ್ಗಾವಣೆಗೊಂಡರೆ ಅಲ್ಲಿನ ವ್ಯಾಪಾರ ಕಡಿಮೆಯಾಗುತ್ತದೆ. ಹೀಗಾಗಿ ಆ ಭಾಗದ ಪಟ್ಟಣ ಪಂಚಾಯಿತಿ ಸದಸ್ಯರು, ವ್ಯಾಪಾರಸ್ಥ ಮುಖಂಡರು ಸಂತೆ ಸ್ಥಳ ವರ್ಗಾವಣೆಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.
‘ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ಹತ್ತು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲ. ಅಲ್ಲದೆ ಇಲ್ಲಿ ಕಾರ್ಯದರ್ಶಿ ಹುದ್ದೆ ಖಾಲಿಯಿದ್ದು ಬೇರೆಯವರಿಗೆ ಹೆಚ್ಚುವರಿಯಾಗಿ ಕಾರ್ಯಭಾರ ವಹಿಸಿದ್ದರಿಂದ ಅವರು ಬರುವುದು ಅಪರೂಪ. ಹೀಗಾಗಿ ಕಾಟಚಾರಕ್ಕಾಗಿ ಸಂಬಳ ಪಡೆಯಲು ಇಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ವಿನಃ ರೈತರ ಸಮಸ್ಯೆ ಕೇಳುವವರು ಇಲ್ಲಿ ಯಾರು ಇಲ್ಲ’ ಎನ್ನುತ್ತಾರೆ ಸಾರ್ವಜನಿಕರು.
ಕೃಷಿ ಮಾರುಕಟ್ಟೆ ಸಚಿವರನ್ನು ಭೇಟಿಯಾಗಿ ಒಬ್ಬ ಕಾಯಂ ಕಾರ್ಯದರ್ಶಿಯನ್ನು ಕೃಷಿ ಮಾರುಕಟ್ಟೆಗೆ ವರ್ಗಾವಣೆ ಮಾಡಲು ಪ್ರಯತ್ನ ಮಾಡುತ್ತೇನೆ. ಅದರಂತೆ ಹಾಳುಬಿದ್ದ ಕೃಷಿ ಮಾರುಕಟ್ಟೆ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು-ಎಂ.ವೈ. ಪಾಟೀಲ್, ಶಾಸಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.