ಕಲಬುರ್ಗಿ: ಜಿಲ್ಲೆಯಲ್ಲಿ ಮಳೆ ಬೀಳುತ್ತಿರುವುದರಿಂದ ಉಲ್ಲಸಿತರಾಗಿರುವ ರೈತರು ಬಿತ್ತನೆ ಕಾರ್ಯಕ್ಕಾಗಿ ಹೊಲವನ್ನು ಸಜ್ಜುಗೊಳಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಇಂದಿನಿಂದ ಕೃಷಿ ಪರಿಕರ ಖರೀದಿ ಸಮಯವನ್ನು ಬೆಳಿಗ್ಗೆ 10 ಗಂಟೆ ಬದಲು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಿದ್ದರಿಂದ ಗ್ರಾಮಗಳಿಂದ ಕಾರು, ಬೈಕ್, ಆಟೊ ರಿಕ್ಷಾಗಳಲ್ಲಿ ಬಂದ ರೈತರು ಕೃಷಿ ಉಪಕರಣಗಳನ್ನು ಖರೀದಿಸಿದರು.
ಅಕ್ಕಡಿ ಕಾಳುಗಳನ್ನು ಬಿತ್ತಲು ಅನುವಾಗುವ ಏಕತಾಳ ದಿಂಡನ್ನು ಖರೀದಿಸಿದರು. ಹಲವರು ಬೀಜ, ಗೊಬ್ಬರ, ಕೀಟನಾಶಕ, ಹಗ್ಗ, ಎತ್ತುಗಳಿಗೆ ಕಟ್ಟಲು ಗಂಟೆ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಖರೀದಿಸಿದರು.
ಜಿಲ್ಲಾಡಳಿತ ಖರೀದಿಗೆ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ ಎಂದು ವ್ಯಾಪಾರಿಗಳಾದ ಗೋಪಾಲ ಗಾಜರೆ, ಓಂ ಜಗದೇವ ತಿಳಿಸಿದರು.
ಸೂರ್ಯಕಾಂತಿ ಬೀಜ ₹ 250 ಹೆಚ್ಚಾಗಿದೆ. ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಅನಿವಾರ್ಯವಾಗಿ ಖರೀದಿ ಮಾಡಿದ್ದೇನೆ ಎಂದು ಹಾಗರಗಾ ಗ್ರಾಮದ ರೈತ ದೇವೇಂದ್ರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.