ಚಿತ್ತಾಪುರ ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಅವರ ನೇತೃತ್ವದಲ್ಲಿ ಶನಿವಾರ ಪಟ್ಟಣದ ಲಾಡ್ಜಿಂಗ್ ಕ್ರಾಸಿನಲ್ಲಿ ಪ್ರತಿಭಟನೆ ನಡೆಸಿ, ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಚೌಡಯ್ಯ ಮೂರ್ತಿ ಭಗ್ನ ಮಾಡಿದ್ದನ್ನು ಖಂಡಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ್ ಸುನಿಲ್ ಅವರಿಗೆ ಸಲ್ಲಿಸಿದರು.
ಚಿತ್ತಾಪುರ: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಸ್ಥಾಪಿಸಿದ್ದ ಕೋಲಿ, ಕಬ್ಬಲಿಗ ಸಮಾಜದ ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿ ಅವಮಾನಿಸಿದ ಘಟನೆಯನ್ನು ಖಂಡಿಸಿ ಮತ್ತು ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ತಾಲ್ಲೂಕು ಕೋಲಿ ಸಮಾಜದಿಂದ ಪಟ್ಟಣದ ಲಾಡ್ಜಿಂಗ್ ಕ್ರಾಸಿನಲ್ಲಿ ಮಾನವ ಸರಪಳಿ ರಚಿಸಿ, ರಸ್ತೆತಡೆ ಮಾಡಿ, ಟೈರ್ ಸುಟ್ಟು ಪ್ರತಿಭಟನೆ ಮಾಡಲಾಯಿತು.
ಕೋಲಿ ಸಮಾಜ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಅವರು ಮಾತನಾಡಿ, ‘ಸಮಾಜದ ಕುಲಗುರು ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ದುಷ್ಕೃತ್ಯ ಖಂಡನೀಯ. ಇಡೀ ಸಮಾಜದ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಇಂತಹ ಕೃತ್ಯ ಸಮಾಜವು ಸಹಿಸುವುದಿಲ್ಲ.ಕಿಡಿಗೇಡಿಗಳು ಯಾರೇ ಇರಲಿ ಶೀಘ್ರ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅವರು ಆಕ್ರೋಶ ವ್ಯಕ್ತ ಮಾಡಿದರು.
ತಾಲ್ಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ್ ಅವರು ಮಾತನಾಡಿ, ‘ಚೌಡಯ್ಯನ ಮೂರ್ತಿ ಭಗ್ನ ಮಾಡಿರುವುದು ಉಗ್ರವಾಗಿ ಖಂಡಿಸುತ್ತೇವೆ. ಸಮಾಜದಲ್ಲಿ ಸಾರ್ವಜನಿಕ ಶಾಂತಿಗೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಕಿಡಗೇಡಿ ಮತ್ತು ಅದಕ್ಕೆ ಪ್ರಚೋದನೆ ನೀಡಿರುವವರನ್ನು ಬಂಧನ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಮಾಜಿ ಅಧ್ಯಕ್ಷ ಹಣಮಂತ ಸಂಕನೂರ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಸುರೇಶ ಬೆನಕನಳ್ಳಿ, ಯುವ ಅಧ್ಯಕ್ಷ ರಾಜೇಶ ಹೋಳಿಕಟ್ಟಿ ಅವರು ಮಾತನಾಡಿದರು.
ಒಂದುವರೆ ಗಂಟೆಕಾಲ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಾಲಾಗಿ ನಿಂತಿದ್ದವು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಸುನಿಲ್ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಎಮ್ಮೆನೋರ್, ವೆಂಕರಮಣ ಬೇವಿನಗಿಡ, ಮಹೇಶದತ್ತ ವಠಾರ್, ಕರಣಕುಮಾರ ಬೂನಿ, ಪ್ರಭು ಹಲಕರ್ಟಿ, ಬಸವರಾಜ ಮೈನಾಳಕರ್, ಅಂಬು ಹೋಳಿಕಟ್ಟಿ, ಹಣಮಂತ ಕಟ್ಟಿ, ಶಿವರಾಯ ಹೊಸಮನಿ, ನಾಗೇಂದ್ರ ಜೈಗಂಗಾ, ದತ್ತಪ್ಪ ಬುಕ್ಕಾ, ಕರಿಗೂಳಿ ರಾಮತೀರ್ಥ, ಅಶೋಕ ಬಾನರ್, ಕರಣು ಇಸಬಾ, ಶರಣು ಸಿದ್ರಾಮಗೋಳ, ಸೂರ್ಯಕಾಂತ ಕೊಂಕನಳ್ಳಿ, ರವಿ ಮುಡಬೂಳ, ಶೇಕಪ್ಪ ಇಟಗಾ, ದುರ್ಜನ ನಾಟಿಕಾರ್, ಈರಣ್ಣಾ ಇಸಬಾ, ಶಿವಶರಣ ಡೋಣಗಾಂವ, ಬಸವರಾಜ ಜಕಾತಿ ಸೇರಿದಂತೆ ಅನೇಕರು ಇದ್ದರು.
ಸಿಪಿಐ ಚಂದ್ರಶೇಖರ ತಿಗಡಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
ಕಲಬುರಗಿ: ‘ಶಹಾಬಾದ್ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಯ ಕೈ ಕತ್ತರಿಸಿ, ಮುಖಕ್ಕೆ ಕೆಸರು ಸಿಂಪಡಿಸಿ ವಿಕೃತಿ ಮೆರೆದ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಲ್ಯಾಣ ಕರ್ನಾಟಕ ಸಂಘಟನಾ ಮಾಜಿ ಕಾರ್ಯದರ್ಶಿ ಪಿಡ್ಡಪ್ಪ ಜಾಲಗಾರ ಸುರಪೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಚೌಡಯ್ಯನವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ವಚನಗಳ ಮೂಲಕ ಸಮಾನತೆ ಸಾರಿದ್ದಾರೆ. ಮುತ್ತಗಾ ಗ್ರಾಮದಲ್ಲಿ ತಕ್ಷಣ ಕಂಚಿನ ಮೂರ್ತಿ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.