
ಅಂಗನವಾಡಿ ಕಾರ್ಯಕರ್ತೆ ಹೀನಾ, ಮೇಲ್ವಿಚಾರಕಿ ಪಿಂಕುಬಾಯಿ ಗಾಯಕವಾಡ
ಕಲಬುರಗಿ: ಮೊಟ್ಟೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಸ್ಟೇಷನ್ ಬಜಾರ್ ಅಂಗನವಾಡಿ ಕಾರ್ಯಕರ್ತೆ ಹೀನಾ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಪಿಂಕುಬಾಯಿ ಗಾಯಕವಾಡ ‘ಲೋಕಾ’ ಬಲೆಗೆ ಬಿದ್ದ ಆರೋಪಿಗಳು.
‘ನಮ್ಮ ಅಂಗನವಾಡಿ ಕೇಂದ್ರಕ್ಕೆ ಮೂರು ತಿಂಗಳ ಮೊಟ್ಟೆ ಹಣವಾಗಿ ₹14,490 ಜಮೆ ಆಗಿದೆ. ಅದರಲ್ಲಿ ಒಂದು ತಿಂಗಳ ಮೊಟ್ಟೆ ಹಣ ₹4,830 ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ತಲಾ ₹600ರಂತೆ ಒಟ್ಟು ₹1,200 ಸೇರಿದಂತೆ ಒಟ್ಟು ₹6,030 ಲಂಚ ನೀಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು’ ಎಂದು ಕಲಬುರಗಿಯ ಉದಯ ನಗರ ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ ಬಲಭೀಮ ರಾಠೋಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್–2 ರಾಜಶೇಖರ ಬಡದೆಸಾರ ನೇತೃತ್ವದ ತಂಡವು ಬುಧವಾರ ಆರೋಪಿಗಳು ₹6,030 ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.