ADVERTISEMENT

ಕಲಬುರಗಿ: ಶಸ್ತ್ರಾಸ್ತ್ರ ತೋರಿಸಿ ಚಿನ್ನಾಭರಣ ದರೋಡೆ

ಕಲಬುರಗಿ ಜನತೆ ಬೆಚ್ಚಿಬೀಳಿಸಿದ ಘಟನೆ; ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 7:23 IST
Last Updated 12 ಜುಲೈ 2025, 7:23 IST
ಕಲಬುರಗಿಯಲ್ಲಿ ದರೋಡೆ ನಡೆದ ಅಂಗಡಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಮಿಷನರ್ ಶರಣಪ್ಪ ಎಸ್‌.ಡಿ., ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್ ಇದ್ದರು
ಕಲಬುರಗಿಯಲ್ಲಿ ದರೋಡೆ ನಡೆದ ಅಂಗಡಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಮಿಷನರ್ ಶರಣಪ್ಪ ಎಸ್‌.ಡಿ., ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್ ಇದ್ದರು   

ಕಲಬುರಗಿ: ನಗರದ ಸಫಾರ್‌ ಬಜಾರ್‌ ಪ್ರದೇಶದ ಜೈಭವಾನಿ ವಾಣಿಜ್ಯ ಸಂಕೀರ್ಣದಲ್ಲಿರುವ ‘ಮಾಲೀಕ್‌ ಜುವೆಲರ್ಸ್’ ಚಿನ್ನದ ಆಭರಣ ಸಿದ್ಧಪಡಿಸಿ ವಿವಿಧ ಬಂಗಾರದ ಅಂಗಡಿಗಳಿಗೆ ಮಾರುವ ಅಂಗಡಿ. ಕಳೆದ 20 ವರ್ಷಗಳಿಂದ ಈ ಕೆಲಸ ಮಾಡುತ್ತಿದೆ. ಮತಿವುಲ್ಲಾ ಮಲಿಕ್‌ ಹಾಗೂ ಸೊಫಿಕತ್‌ಉಲ್ಲಾ ಮಲಿಕ್‌ ಸೇರಿಕೊಂಡು ಈ ಅಂಗಡಿ ನಡೆಸುತ್ತಾರೆ.

ಸೊಫಿಕತ್‌ಉಲ್ಲಾ ಶುಕ್ರವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಎಂದಿನಂತೆ ಅಂಗಡಿ ಬಾಗಿಲು ತೆರೆದಿದ್ದರು. ಆದರೆ, ಎಂದಿನಂತೆ ವಹಿವಾಟು ನಡೆಯಲಿಲ್ಲ, ಬದಲಿಗೆ ಆಘಾತ ಕಾದಿತ್ತು. ತಲೆಗೆ ಕ್ಯಾಪ್‌, ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಅಂಗಡಿಗೆ ನುಗ್ಗಿದ ನಾಲ್ವರು ಆರೋಪಿಗಳ ಗ್ಯಾಂಗ್‌, ಪಿಸ್ತೂಲ್‌, ಚಾಕು ತೋರಿಸಿ 820 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಯಿತು. ಹೋಗುವಾಗ ಅಂಗಡಿಯ ಸಿಸಿ ಟಿವಿಯ ಸಂಪರ್ಕ ಕಡಿತಗೊಳಿಸಿದ್ದಾರೆ.

‘ನನ್ನ ತಮ್ಮ 12 ಗಂಟೆ ಹೊತ್ತಿಗೆ ಅಂಗಡಿ ತೆರೆದಿದ್ದ. ಅದೇ ಸಮಯಕ್ಕೆ ನಾಲ್ವರು ಆರೋಪಿಗಳ ಗ್ಯಾಂಗ್‌ ಅಂಗಡಿಗೆ ನುಗ್ಗಿದೆ. ಇಬ್ಬರು   ತಲೆಗೆ ಶಸ್ತ್ರಾಸ್ತ್ರ ಹಿಡಿದಿದ್ದಾರೆ. ಮತ್ತೊಬ್ಬ ಕುತ್ತಿಗೆಗೆ ಚಾಕು ಹಿಡಿದ್ದಿದ್ದಾನೆ. ಮತ್ತೊಬ್ಬ ಜಿಗಿದು ಕೈಕಾಲು ಕಟ್ಟಿ, ಬಾಯಿಗೆ ಸೆಲ್ಲೊ ಟೇಪ್‌ ಹಚ್ಚಿದ್ದಾನೆ. ಬಳಿಕ ಚಿನ್ನಾಭರಣ ದೋಚಿ ಗ್ಯಾಂಗ್‌ ಪರಾರಿಯಾಗಿರುವುದಾಗಿ ಸಹೋದರ ತಿಳಿಸಿದ್ದಾನೆ’ ಎಂದು ಅಂಗಡಿಯ ಮಾಲೀಕ ಮತಿವುಲ್ಲಾ ಮಲಿಕ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಜನನಿಬಿಡ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿಗೆ ಈ ದರೋಡೆ ನಡೆದಿದೆ. ವ್ಯಾಪಾರ ಆರಂಭಿಸುವ ಹೊತ್ತಲ್ಲಿ ಈ ಕೃತ್ಯ ನಡೆದಿರುವುದು ಶಾಕ್‌ ಆಗಿದೆ’ ಎನ್ನುತ್ತಾರೆ ಪ್ರತ್ಯಕ್ಷದರ್ಶಿ ರಾಜಶೇಖರ.

ಅಧಿಕಾರಿಗಳ ದಂಡು:

ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳ ದಂಡು ಧಾವಿಸಿ, ಪರಿಶೀಲನೆ ನಡೆಸಿತು. ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್‌.ಡಿ., ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್‌, ಪ್ರವೀಣ ನಾಯಕ ಸೇರಿದಂತೆ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ದರೋಡೆ ನಡೆದ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳದ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರು ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ತಂಡ ರಚನೆ:

‘ದರೋಡೆ ಪ್ರಕರಣ ಭೇದಿಸಲು ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳ ಐದು ತಂಡಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಹೇಳಿದ್ದಾರೆ.

ಕಾಡುತ್ತಿದೆ ಶಂಕೆ:

‘ನಾಲ್ಕೈದು ವರ್ಷಗಳ ಹಿಂದೆ ಇದೇ ಅಂಗಡಿಯಲ್ಲಿ ಕಾರ್ಮಿಕನೊಬ್ಬ ಚಿನ್ನ ಕದ್ದಿದ್ದ ಬಗ್ಗೆ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಕಾರ್ಮಿಕನನ್ನು ಕಿತ್ತು ಹಾಕಲಾಗಿತ್ತು. ಈ ಆ ವ್ಯಕ್ತಿಯೇ ಗುಂಪು ಕಟ್ಟಿಕೊಂಡು ಇದೀಗ ದರೋಡೆ ಮಾಡಿರಬಹುದು’ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಭೇಟಿ ವೇಳೆ ನೆರೆದಿದ್ದ ಜನರು
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಚಲನವಲನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.