ADVERTISEMENT

ಕಲಬುರಗಿ: ಎಟಿಎಂ ಯಂತ್ರ ಧ್ವಂಸಗೊಳಿಸಿ ₹18 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
ಕಲಬುರಗಿಯಲ್ಲಿ ಬುಧವಾರ ದರೋಡೆಕೋರರಿಂದ ಧ್ವಂಸಗೊಂಡ ಎಟಿಎಂ ಯಂತ್ರ
ಕಲಬುರಗಿಯಲ್ಲಿ ಬುಧವಾರ ದರೋಡೆಕೋರರಿಂದ ಧ್ವಂಸಗೊಂಡ ಎಟಿಎಂ ಯಂತ್ರ   

ಕಲಬುರಗಿ: ನಗರದ ರಿಂಗ್ ರಸ್ತೆಯ ಪೂಜಾರಿ ವೃತ್ತ ಸಮೀಪದಲ್ಲಿ ಬುಧವಾರ ನಸುಕಿನಲ್ಲಿ ಎಸ್‌ಬಿಐ ಎಟಿಎಂ ಕೇಂದ್ರವನ್ನು ಧ್ವಂಸಗೊಳಿಸಿದ ದರೋಡೆಕೋರರು ₹ 18 ಲಕ್ಷ ದೋಚಿದ್ದಾರೆ.

ಕಾರಿನಲ್ಲಿ ಬಂದ ದರೋಡೆಕೋರರು ಎಟಿಎಂ ಕೇಂದ್ರದ ಒಳಗಿನ ಸಿಸಿಟಿವಿ ಕ್ಯಾಮೆರಾ, ಎಟಿಎಂ ಯಂತ್ರಗಳ ಮೇಲಿನ ಕ್ಯಾಮೆರಾಗಳಿಗೂ ಕಪ್ಪು ಬಣ್ಣದ ಸ್ಪ್ರೇ ಮಾಡಿದ್ದಾರೆ. ಬಳಿಕ ಗ್ಯಾಸ್ ಕಟರ್‌ ಬಳಸಿ ಎಟಿಎಂ ಯಂತ್ರವನ್ನು ಧ್ವಂಸಗೊಳಿಸಿದ್ದಾರೆ. ಕ್ಯಾಶ್ ಬಾಕ್ಸ್‌ನಲ್ಲಿ ಇರಿಸಿದ್ದ ₹ 18 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಎಟಿಎಂ ಕೇಂದ್ರದಲ್ಲಿ ಆರೋಪಿಗಳ ಬೆರಳಚ್ಚು, ವೈಜ್ಞಾನಿಕ ಸಾಕ್ಷಿಗಳು ಸಿಕ್ಕಿವೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡವಾಗಿ ಮಾಹಿತಿ ಹಂಚಿಕೆ: ‘ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಕ್ಕೆ ಡಿಜಿಟಲ್ ಕಣ್ಗಾವಲು ವವಸ್ಥೆ  ಅಳವಡಿಸಲಾಗಿತ್ತು. ಕೃತ್ಯ ನಡೆದು 45 ನಿಮಿಷಗಳ ನಂತರ ಪೊಲೀಸರಿಗೆ ಮಾಹಿತಿ ಬಂದಿದೆ. ಜತೆಗೆ ಬ್ಯಾಂಕ್ ಆಡಳಿತ ಮಂಡಳಿಯವರು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ನೀಡಿಲ್ಲ. ಕೃತ್ಯದ ಸುತ್ತಲಿನಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳು ಇಲ್ಲ. ಇವುಗಳಿಂದ ತನಿಖೆಗೆ ಆರಂಭಿಕ ಅಡ್ಡಿಯಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

‘ಮಂಗಳವಾರ ಸಂಜೆಯೇ ಎಟಿಎಂಗೆ ಹಣ ಹಾಕಿದ್ದು, ಮರುದಿನವೇ ಕೃತ್ಯ ನಡೆದಿದೆ. ಹೀಗಾಗಿ, ಬ್ಯಾಂಕ್ ಸಿಬ್ಬಂದಿ, ಭದ್ರತೆ ಒದಗಿಸುತ್ತಿದ್ದ ಏಜೆನ್ಸಿ ಅಲ್ಲದೆ ಮಾಹಿತಿ ನೀಡಲು ವಿಳಂಬವಾಗಿರುವುದು ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ’ ಎಂದರು.

ಬೀದರ್ ಪ್ರಕರಣ: ಸಿಗದ ಆರೋಪಿಗಳು

ಬೀದರ್‌ನಲ್ಲಿ ಎಸ್‌ಬಿಐ ಮುಖ್ಯ ಕಚೇರಿಯ ಎದುರಿನ ಎಟಿಎಂಗೆ ಜನವರಿ 16ರಂದು ಹಣ ಜಮೆ ಮಾಡಲು ತೆರಳುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು, ₹ 83 ಲಕ್ಷ ನಗದು ಇದ್ದ ಟ್ರಂಕ್‌ ಜೊತೆಗೆ ಬೈಕ್‌ನಲ್ಲಿ ಪರಾರಿ ಆಗಿದ್ದರು. ಕೃತ್ಯ ಎಸಗಿದ್ದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈಗ ಕಲಬುರಗಿಯಲ್ಲೂ ಎಟಿಎಂ ದರೋಡೆ ನಡೆದಿದೆ. ಎಟಿಎಂಗಳ ಸುರಕ್ಷತೆಯ ಬಗ್ಗೆ ಗ್ರಾಹಕರಲ್ಲಿ ಪ್ರಶ್ನೆಗಳು ಮೂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.