ಕಲಬುರಗಿಯ ಚೌಕ ಪೊಲೀಸ್ ಠಾಣೆ ವೃತ್ತದಲ್ಲಿ ಬಿಜೆಪಿಯಿಂದ ನಮೋ ಯುವ ಓಟಕ್ಕೆ ಚಾಲನೆ ನೀಡಲಾಯಿತು
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ಸೇವಾ ಪಾಕ್ಷಿಕದ ಭಾಗವಾಗಿ ಬಿಜೆಪಿಯಿಂದ ನಗರದಲ್ಲಿ ಮಂಗಳವಾರ ಬೆಳಿಗ್ಗೆ ' ನಮೋ ಯುವ ಓಟ' ನಡೆಸಲಾಯಿತು.
ನಗರದ ಚೌಕ ಪೊಲೀಸ್ ಸ್ಟೇಷನ್ ವೃತ್ತದಿಂದ ಆರಂಭವಾದ ಓಟವು ಸೂಪರ್ ಮಾರ್ಕೆಟ್ ಮೂಲಕ ನಗರದ ಜಗತ್ ವೃತ್ತದ ತನಕ ಸಾಗಿ ಬಂತು.
ಬಿಜೆಪಿ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
'ಭಾರತ ಮಾತಕೀ ಜೈ', 'ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ' ಎಂದು ಘೋಷಣೆ ಕೂಗಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, 'ಕಲಬುರಗಿ ಸೇರಿದಂತೆ ರಾಜ್ಯ, ದೇಶದಲ್ಲಿ ಸೆ.17ಕ್ಕೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಿಸಲಾಗಿದೆ. ಆದರೆ, ಅವರ ಜನ್ಮದ ಅಂಗವಾಗಿ ಸೇವಾ ಪಾಕ್ಷಿಕ ನಡೆಸಲಾಗುತ್ತಿದೆ. ಅದರ ಭಾಗವಾಗಿ ಪಕ್ಷದ ಕಲಬುರಗಿ ನಗರ ಜಿಲ್ಲಾ ಘಟಕ , ಗ್ರಾಮೀಣ ಜಿಲ್ಲಾ ಘಟಕ ಹಾಗೂ ಯುವ ಮೋರ್ಚಾದಿಂದ ಜಿಲ್ಲೆಯ ಯುವ ಜನರಲ್ಲಿ ಆರೋಗ್ಯ ದ ಬಗೆಗೆ ಜಾಗೃತಿ ಮೂಡಿಸಲು ನಮೋ ಯುವ ಓಟ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಇಂದು ರಕ್ತದಾನ ಶಿಬಿರ, ಆರೋಗ್ಯ ಶಿಬಿರವೂ ನಡೆಯಲಿದೆ. ಈ ಓಟದಲ್ಲಿ ಪಾಲ್ಗೊಂಡಂತೆ ಯುವಜನರು ನಿತ್ಯವೂ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡಬೇಕು' ಎಂದು ಸಲಹೆ ನೀಡಿದರು.
ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, 'ಆರೋಗ್ಯವೇ ಭಾಗ್ಯ ಎಂಬ ಮಾತಿದೆ.ಸಕಲ ಸಂಪತ್ತಿಗಿಂತಲೂ ಉತ್ತಮ ಆರೋಗ್ಯ ಮುಖ್ಯವಾಗುತ್ತದೆ. ಹೀಗಾಗಿ ಯುವಜನರು ದುಡ್ಡು ಸಂಪಾದಿಸುವುದಕ್ಕಿಂತಲೂ ಉತ್ತಮ ಆರೋಗ್ಯ ಸಂಪಾದನೆ ಮಾಡಬೇಕು. ಆರೋಗ್ಯವಂತ ಯುವಕರು ಇದ್ದರೆ ದೇಶವೂ ಸದೃಢವಾಗಿ ಇರುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಸಾಕಾರಕ್ಕೆ ನಾವೆಲ್ಲ ಕೈಜೋಡಿಸಬೇಕು' ಎಂದರು.
ಓಟದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಮುಖಂಡರಾದ ಶರಣಪ್ಪ ತಳವಾರ, ನಿತಿನ್ ಗುತ್ತಿಗೆದಾರ, ಯುವ ಮೋರ್ಚಾ ಅಧ್ಯಕ್ಷ ಮಹೇಶ ಚವ್ಹಾಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.