ಕಲಬುರಗಿ: ‘ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಯುತ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಬನ್ನಪ್ಪ ಬಿ.ಕೆ ರಚನೆಯ ‘ನೈತಿಕ ಶಿಕ್ಷಣ,’ ಮತ್ತು ‘ಜೀವನ ಶಿಕ್ಷಣ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಎರಡೂ ಕೃತಿಗಳನ್ನು ಬನ್ನಪ್ಪ ಬಿ.ಕೆ ಅವರು ಒಂದೇ ಸ್ಥಳದಲ್ಲಿ ಕೂತು ಬರೆದಿಲ್ಲ. ನರೇಂದ್ರ ಮೋದಿಯವರ ಬಗ್ಗೆ ಬರೆಯುವಾಗ ಗುಜರಾತ್ನ ಅವರ ಗ್ರಾಮಕ್ಕೆ ಹೋಗಿ ನೈಜ ಚಿತ್ರಣ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.
‘ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮ ನಿರ್ಮಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗ ಕಾಯ್ದಿರಿಸಲಾಗಿದ್ದು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಿಸಲು ಉದ್ದೇಶವಿದೆ’ ಎಂದರು. ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ‘ನೈತಿಕತೆ, ಪ್ರಾಮಾಣಿಕತೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪುಸ್ತಕಗಳ ಅವಶ್ಯಕತೆ ಇದೆ. ನಮ್ಮ ಶಿಕ್ಷಣ ಸಂಸ್ಥೆ ಗ್ರಂಥಾಲಯಗಳಿಗೆ ಈ ಎರಡೂ ಪುಸ್ತಕ ತೆಗೆದುಕೊಳ್ಳುವೆ’ ಎಂದರು. ಲೇಖಕ ಬನ್ನಪ್ಪ. ಬಿ.ಕೆ ಮಾತನಾಡಿದರು.
ವಿಧಾನಸಭೆಯ ಮಾಜಿ ಸಭಾಪತಿ ಚಂದ್ರಶೇಖರರೆಡ್ಡಿ ಲೇಖಕರ ಕುರಿತು ಮಾತನಾಡಿದರು. ಉಪನ್ಯಾಸಕ ಆನಂದ ಸಿದ್ದಾಮಣಿ ಪುಸ್ತಕಗಳ ಪರಿಚಯ ಮಾಡಿದರು. ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪ್ರಮುಖರಾದ ಸಿದ್ದಾಜಿ ಪಾಟೀಲ, ವಿಠಲ ನಾಯಕ, ಪ್ರಭಾಕರ ಜೋಶಿ, ರಾಘವೇಂದ್ರ ಕುಲಕರ್ಣಿ, ಈರಣ್ಣ ವಿರಾಪುರ ಇದ್ದರು. ಕಾರ್ಯಕ್ರಮದ ನಂತರ ಲೇಖಕ ಬನ್ನಪ್ಪ ಬಿ.ಕೆ ಅವರಿಗೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಅಭಿಮಾನಿಗಳು ಸನ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.