ಆಳಂದ: ‘ಶಾಲಾ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವುದು ಅಪಾಯಕಾರಿ’ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ತು ಮತ್ತು ಭಾರತ ಸೇವಾದಳ ಸಹಯೋಗದಲ್ಲಿ ಸೇವಾದಳದ ಸಂಘಟಕ ಶಿವಪುತ್ರಪ್ಪ ಮೇತ್ರೆ ಪುಣ್ಯಸ್ಮರಣೋತ್ಸವ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ, ‘ಶಿಕ್ಷಕರಾದ ಶಿವಪುತ್ರಪ್ಪ ಮೇತ್ರೆ ಅವರು ಆಳಂದ ತಾಲ್ಲೂಕಿನಲ್ಲಿ ಸೇವಾದಳ ಸಂಘಟನೆ ಬಲಪಡೆಸಲು ವಿಶೇಷವಾಗಿ ಶ್ರಮಿಸಿದರು. ಅವರ ಶಿಸ್ತು, ಸೇವಾ ಮನೋಭಾವ ಮಾದರಿ’ ಎಂದರು.
ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಸೂರ್ಯಕಾಂತ ತಟ್ಟಿ, ಸಂಪನ್ಮೂಲ ವ್ಯಕ್ತಿ ಚನ್ನಮಲ್ಲಯ್ಯ ಕಠಾರಿಮಠ , ರುಕ್ಮೀಣಿ ಸಂಗಾ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಕಾಳಜಿ ಜೊತೆಗೆ ಉತ್ತಮ ಮೌಲ್ಯಗಳು ಬೆಳೆಸುವುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ಸಿದ್ದಲಿಂಗ ಶಿವಪುತ್ರಪ್ಪ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ.ವೈಷ್ಣವಿ, ವಿಠಲರಾವ ತಡಕಲೆ, ಚಂದ್ರಶೇಖರ ಜಂಗಲೆ, ಕಾಶಿನಾಥ ಜಮದಾರ, ಮಹಾಂತೇಶ ಸೋಮಾ, ಪ್ರಮೋದ ಪಂಚಾಳ, ಸಿದ್ದರಾಮ ಗೂಂಡೂರೆ, ಪೂಜಾ ಮೇತ್ರೆ, ಸೋಮು ಕಠಾರಿಮಠ, ಧರ್ಮರಾಯ ಕೊರಳ್ಳಿ, ದೀಪ್ತಿ ಮಡ್ಡೆ ಇದ್ದರು.
ಹಾಸ್ಯ ಕಲಾವಿದ ರಾಜಶೇಖರ ಹೆಬ್ಬಾಳ ಅವರಿಂದ ನಗೆಹಬ್ಬ ಹಾಗೂ ಜಾನಪದ ಗಾಯನ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.