ಚಿತ್ತಾಪುರ (ಕಲಬುರ್ಗಿ): ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಹತ್ತಿರ ವಾಗ್ದರಿ- ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಸೇತುವೆ ಬಳಿಯ ರಸ್ತೆ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಸಾರಿಗೆ ಸಂಚಾರ ಬಂದ್ ಆಗಿದೆ.
ಗುಂಡಗುರ್ತಿ ಹಳ್ಳಕ್ಕೆ ಬುಧವಾರ ಭಾರಿ ಪ್ರಮಾಣದಲ್ಲಿ ಪ್ರವಾಹ ಉಕ್ಕಿ ಬಂದು ಹಳ್ಳವು ಭೋರ್ಗೆರೆಯುತ್ತಾ ಹರಿಯುತ್ತಿತ್ತು. ಪ್ರವಾಹದ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿ ಬೃಹತ್ ಗುಂಡಿ ಉಂಟಾಗಿ ಸಂಚಾರಕ್ಕೆ ಸಂಕಟ ಒದಗಿದೆ.
ಹೆಚ್ಚಿನ ಅಪಾಯ ಉಂಟಾಗದಿರಲಿ ಎಂದು ಈ ಮಾರ್ಗದ ವಾಹನ ಸಂಚಾರ ಬಂದ್ ಮಾಡಲಾಗಿದೆ. ವಾಗ್ಧರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ನಿರ್ವಣೆ ಹೊಂದಿರುವ ಸಂಸ್ಥೆಯು ಸೇತುವೆಯ ಕೊಚ್ಚಿ ಹೋದ ರಸ್ತೆಯನ್ನು ಗುರುವಾರ ಬೆಳಿಗ್ಗೆ ದುರಸ್ತಿ ಕೆಲಸ ಕೈಗೊಂಡಿದೆ.
ಹೆದ್ದಾರಿ ರಸ್ತೆ ಕೊಚ್ಚಿ ಹೋಗಿರುವ ಕುರಿತು ಪರಿಶೀಲಿಸಲು ಲೋಕೋಪಯೋಗಿ ಇಲಾಖೆಯ ಯಾವ ಅಧಿಕಾರಿಗಳೂ ಘಟನಾ ಸ್ಥಳದಲ್ಲಿ ಇರಲಿಲ್ಲ. ಅಧಿಕಾರಿಗಳ ವರ್ತನೆಗೆ ಜನರು ಆಕ್ರೋಶ ವ್ಯಕ್ತ ಮಾಡುತ್ತಿದ್ದರು.
ಮಳೆ ಮತ್ತು ಪ್ರವಾಹಕ್ಕೆ ಅನೇಕ ರಸ್ತೆಗಳು ಕೊಚ್ಚಿ ಹೋಗಿವೆ. ಹದಗೆಟ್ಟಿವೆ. ಅಧಿಕಾರಿಗಳು ತುರ್ತಾಗಿ ದುರಸ್ತಿ ಕೆಲಸ ಮಾಡಿಸಬೇಕು ಎಂದು ಜಾತ್ಯತೀತ ಜನತಾ ದಳ ಪಕ್ಷದ ತಾಲ್ಲೂಕು ಅಧ್ಯಕ್ಷ ನಾಗಣ್ಣ ವಾರದ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.