ಕಲಬುರ್ಗಿ: ’ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕೆಂದು ಕರ್ನಾಟಕ ಹೈಕೋರ್ಟ್ನ ಆದೇಶವಿದ್ದರೂ ಜೆಸ್ಕಾಂ ನೌಕರಿ ಕೊಡಲು ವಿಳಂಬ ಮಾಡುತ್ತಿದೆ. 16 ವರ್ಷಗಳಿಂದ ಕಾಯುತ್ತಿರುವ ನಮಗೆ ಕೂಡಲೇ ಉದ್ಯೋಗ ನೇಮಕಾತಿ ನೀಡಬೇಕು’ ಎಂದು ಕೊಪ್ಪಳ ಜಿಲ್ಲೆ kaಗಂಗಾವತಿಯ ರಾಜು ಎಚ್.ಬಸವರಾಜ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜು, ‘ಜೆಸ್ಕಾಂನಲ್ಲಿ ಶುಚಿಗಾರರಾಗಿ ಕೆಲಸ ಮಾಡುತ್ತಿದ್ದ ತಂದೆ ಬಸವರಾಜ ಅವರು 2005ರಲ್ಲಿ ಮೃತಪಟ್ಟರು. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕೆಂದು ಜೆಸ್ಕಾಂಗೆ ಎಲ್ಲಾ ದಾಖಲಾತಿಗಳನ್ನು ನೀಡಲಾಗಿದೆ. ಅನುಕಂಪದ ನೌಕರಿ ನೀಡುವ ಬಗೆಗಿನ ನ್ಯಾಯಾಲಯದ ಆದೇಶದ ಪ್ರತಿಯನ್ನು ಸಲ್ಲಿಸಲಾಗಿದೆ. ಒಂದು ವಾರದೊಳಗೆ ನೌಕರಿಯ ಆದೇಶ ನೀಡಲಾಗುವುದು ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ತಿಳಿಸಿದ್ದರು. ಆ ನಂತರ ಈ ಬಗ್ಗೆ ಕೇಳಲು ಹೋದರೆ ಅವರ ಆಪ್ತ ಸಹಾಯಕರು ಒಳಗೇ ಬಿಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಂದೆ ತೀರಿಕೊಂಡನಂತರ ತಾಯಿಯವರ ಆರೋಗ್ಯವೂ ಸರಿಯಲ್ಲ. ಸ್ಟೌವ್ ಸಿಡಿದಿದ್ದರಿಂದ ಮುಖ ಕುತ್ತಿಗೆ ಭಾಗದಲ್ಲಿ ಸುಟ್ಟಿರುತ್ತದೆ. ತಾಯಿಯವರ ಆರೋಗ್ಯದ ಜವಾಬ್ದಾರಿ ನನ್ನ ಮೇಲಿದ. ತಂದೆಯವರ ಮೇಲೆಯ ಅವಲಂಬಿತವಾದ ನಮ್ಮ ಕುಟುಂಬ ಈಗ ಸಂಕಷ್ಟದಲ್ಲಿದೆ. ಕಳೆದ 16 ವರ್ಷಗಳಿಂದ ಅನುಕಂಪದ ಆಧಾರದ ನೌಕರಿಗಾಗಿ ಕಾಯುತ್ತಿರುವ ನನಗೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.