ಕಲಬುರಗಿ:‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯುಪಿಎ ಅಸ್ತಿತ್ವವನ್ನು ಪ್ರಶ್ನಿಸಿದ್ದಾರೆ ಎಂಬ ಕಾರಣಕ್ಕೇ ಟಿಎಂಸಿ ಜತೆಗೆ ಮೈತ್ರಿ ಮುರಿದುಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದುರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುಪಿಎ ಎಲ್ಲಿದೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ದೇಶದಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಿರುವುದೇ ಕಾಂಗ್ರೆಸ್ ನೇತೃತ್ವದ ಯುಪಿಎ. ಮಹಾರಾಷ್ಟ್ರ, ಕೇರಳ, ಕೇರಳ, ಉತ್ತರಾಖಂಡ ಹೀಗೆ ಹಲವು ಕಡೆ ಯುಪಿಎ ಇದೆ ಎಂಬುದು ಗೊತ್ತಿಲ್ಲವೇನು’ ಎಂದು ಪ್ರಶ್ನಿಸಿದರು.
‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತೀಯ ಶಕ್ತಿಗಳ ದಬ್ಬಾಳಿಕೆ ಹೆಚ್ಚಿದೆ. ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವನ್ನು ಆ ರಾಜ್ಯಗಳಲ್ಲಿ ಸಂಘಟಿಸಿ ಅಧಿಕಾರಕ್ಕೆ ಬರಲಿ. ಕೋಮುವಾದಿ ಬಿಜೆಪಿ ಸ್ಥಳವನ್ನು ಆಕ್ರಮಿಸಿಕೊಳ್ಳಲು ಟಿಎಂಸಿ ತಂತ್ರ ರೂಪಿಸಬೇಕು’ ಎಂದು ಸಲಹೆ ಮಾಡಿದರು.
‘ರೈಲ್ವೆ ಕೋಚ್ ಕಾರ್ಖಾನೆ ಅಭಿವೃದ್ಧಿ ನಿರ್ಲಕ್ಷ್ಯ’ (ಯಾದಗಿರಿ ವರದಿ): ‘ಜಿಲ್ಲೆಯ ಕಡೇಚೂರಿನಲ್ಲಿ ನಮ್ಮ ಸರ್ಕಾರ ಸ್ಥಾಪಿಸಿದ್ದ ರೈಲ್ವೆ ಕೋಚ್ ನಿರ್ಮಾಣ ಕಾರ್ಖಾನೆಯ ಅಭಿವೃದ್ಧಿಯನ್ನು ಈಗಿನ ಸರ್ಕಾರ ಕಡೆಗಣಿಸಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದರು.
ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ‘ನಾನು ರೈಲ್ವೆ ಸಚಿವನಾಗಿದ್ದಾಗ ಗದಗ–ವಾಡಿ ರೈಲು ಮಾರ್ಗ ಯೋಜನೆಗೆ ಚಾಲನೆ ನೀಡಿದ್ದೇವೆ. ಈಗ ಕಾಮಗಾರಿ ಅರ್ಧ ಆಗಿದೆ. ಇಲ್ಲಿಯ ರೈಲ್ವೆ ಕೋಚ್ ಕಾರ್ಖಾನೆ ಅಭಿವೃದ್ಧಿ ಮಾಡದೇ ಮೋದಿ ನೇತೃತ್ವದ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆದಿದೆ‘ ಎಂದು ಅವರು ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.