ಕಲಬುರಗಿ: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆಪಾದಿಸಿ ಎಸ್ಐಟಿ ಮೂಲಕ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮತ್ತು ಅವರ ಮಕ್ಕಳ ಮನೆ ಮೇಲೆ ದಾಳಿ ಮಾಡಿ ರಾಜಕೀಯ ಭವಿಷ್ಯ ಮುಗಿಸಲು ಷಡ್ಯಂತ್ರ ಹೂಡಲಾಗುತ್ತಿದೆ ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ಆಳಂದ ಮತಕ್ಷೇತ್ರದಿಂದ ಹಲವು ಬಾರಿ ಗೆದ್ದು ಶಾಸಕರಾಗಿದ್ದ ಸುಭಾಷ್ ಗುತ್ತೇದಾರ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆದರೆ ಈಗ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸೇಡಿನ ರಾಜಕೀಯವಾಗಿದೆ. ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ನಾಯಕ ಸೇರಿದಂತೆ 26 ಪಂಗಡಗಳ ನಾಯಕರನ್ನು ರಾಜಕೀಯವಾಗಿ ಮುಗಿಸಲು ತೆರೆ ಮರೆಯಲ್ಲಿ ಹುನ್ನಾರ ನಡೆಯುತ್ತಿದೆ. ಆಳಂದದಲ್ಲಿ ಸುಭಾಷ್ ಗುತ್ತೇದಾರ ಅಭಿವೃದ್ಧಿ ಮಾಡಿರುವುದನ್ನು ಕ್ಷೇತ್ರದ ಜನ ಈಗಲೂ ಕೊಂಡಾಡುತ್ತಿದ್ದಾರೆ. ಗುತ್ತೇದಾರ ಮತ್ತು ಅವರ ಮಕ್ಕಳ ವಿರುದ್ಧ ರಾಜಕೀಯ ಷಡ್ಯಂತ್ರ ಹೂಡಲಾಗುತ್ತಿದೆ. 6 ತಿಂಗಳ ಹಿಂದೆ ಸಂತೋಷ ಗುತ್ತೇದಾರ ಮನೆ ಮೇಲೆ ದಾಳಿ ಮಾಡಿ ಬಂಧಿಸಲಾಗಿತ್ತು. ಇದು ದ್ವೇಷದ ರಾಜಕೀಯ ಹೊರತು ಬೇರೇನಲ್ಲ. ಇದು ಖಂಡನೀಯ ಎಂದಿದ್ದಾರೆ.
‘ಗುತ್ತೇದಾರ ಕುಟುಂಬದ ರಾಜಕೀಯ ಭವಿಷ್ಯ ಮುಗಿಸುವುದು ಅಸಾಧ್ಯ. ಅಂತಹ ದುಸ್ಸಾಹಸಕ್ಕೆ ಇಳಿದರೆ ನಾವು ಗುತ್ತೇದಾರರನ್ನು ಬೆಂಬಲಿಸಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ, ಎಸ್ಐಟಿ ತಂಡ ಹಾಗೂ ಶಾಸಕ ಬಿ.ಆರ್.ಪಾಟೀಲ ಗಮನಿಸಬೇಕು. ರಾಜಕೀಯ ದ್ವೇಷ ಕೈ ಬಿಟ್ಟು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ರಾಜಕಾರಣ ಮಾಡಲು ಸಲಹೆ ನೀಡುತ್ತಿದ್ದೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.