ADVERTISEMENT

ಅಫಜಲಪುರ: ಕೊರೊನಾ ಭೀತಿಯಿಂದ ಮಾರುಕಟ್ಟೆ ಸ್ಥಗಿತ, 10 ಸಾವಿರ ಎಕರೆ ಬಾಳೆಗೆ ಕುತ್ತು

ಶಿವಾನಂದ ಹಸರಗುಂಡಗಿ
Published 29 ಮಾರ್ಚ್ 2020, 19:45 IST
Last Updated 29 ಮಾರ್ಚ್ 2020, 19:45 IST
ಅಫಜಜಲಪುರದ ಹೊರ ವಲಯದಲ್ಲಿ ಭೂತಾಳಿ ರಾಮಣ್ಣ ಭಂಗಿ ಅವರ ತೋಟದಲ್ಲಿ ಕಟಾವಿಗೆ ಬಂದು ಹಾಳಾಗುತ್ತಿರುವ ಬಾಳೆ ಗೊನೆಗಳು
ಅಫಜಜಲಪುರದ ಹೊರ ವಲಯದಲ್ಲಿ ಭೂತಾಳಿ ರಾಮಣ್ಣ ಭಂಗಿ ಅವರ ತೋಟದಲ್ಲಿ ಕಟಾವಿಗೆ ಬಂದು ಹಾಳಾಗುತ್ತಿರುವ ಬಾಳೆ ಗೊನೆಗಳು   

ಅಫಜಲಪುರ: ತಾಲ್ಲೂಕಿನ ಕರಜಗಿ, ಅತನೂರ, ಅಫಜಲಪುರ ಹೋಬಳಿಗಳಲ್ಲಿ ಕಳೆದ ವರ್ಷ ನಾಟಿ ಮಾಡಿದ ಬಾಳೆ ಬೆಳೆ ಈಗ ಕಟಾವಿಗೆ ಬಂದಿದೆ. ಆದರೆ ಕೊರೊನಾ ಭೀತಿಯಿಂದ ಲಾಕ್‌ಡೌನ್ ಇರುವುದರಿಂದ ಬಾಳೆಗೊನೆ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. 10 ಸಾವಿರ ಎಕರೆಯಲ್ಲಿ ಬಾಳೆಗೊನೆಗಳು ಹಾಳಾಗುತ್ತಿವೆ.

ಅಫಜಲಪುರ ತಾಲ್ಲೂಕು ಮೊದಲಿನಿಂದಲೂ ಬಾಳೆ ಬೆಳೆಗೆ ಪ್ರಸಿದ್ಧ.. ರೈತರು ಹೆಚ್ಚಿನ ಕ್ಷೇತ್ರದಲ್ಲಿ ಬಾಳೆಯನ್ನು ಬೆಳೆಯುತ್ತಾರೆ. ಆದರೆ ಕೊರೊನಾ ಭೀತಿಯಿಂದ ಇಡೀ ಮಾರುಕಟ್ಟೆ ಸ್ಥಗಿತವಾಗಿದ್ದು, ರೈತರು ಪರದಾಡುವಂತಾಗಿದೆ.

‘ನಮ್ಮ ತೋಟದಲ್ಲಿ ಕಳೆದ ವರ್ಷ 3 ಸಾವಿರ ಮತ್ತು 7 ಸಾವಿರ ಬಾಳೆ ನಾಟಿ ಮಾಡಿದ್ದು, ಸದ್ಯಕ್ಕೆ ಕಟಾವಿಗೆ ಬಂದಿದೆ. ಅಫಜಲಪುರ ಪಟ್ಟಣದಲ್ಲಿರುವ ಶರಣಪ್ಪ ಮಾಲಗತ್ತಿ ಎನ್ನುವವರಿಗೆ ಪ್ರತಿ ಕ್ವಿಂಟಲ್ ಬಾಳೆಗೊನೆಗೆ ₹ 1100ರಂತೆ ಮಾರಾಟ ಮಾಡಲಾಗಿತ್ತು, ಆದರೆ ಮಾರುಕಟ್ಟೆಗಳಲ್ಲಿ ಬೇಡಿಕೆ ಇಲ್ಲದ ಕಾರಣ ಅವರು ಕಟಾವು ಮಾಡುತ್ತಿಲ್ಲ. ಬಾಳೆ ಗಿಡಗಳು ಭಾರವಾಗಿ ಕೆಳಗೆ ಬೀಳುತ್ತಿವೆ. ದಿನಾಲೂ ನಾಯಿ, ನರಿ, ಹಂದಿಗಳು ಹಾಳು ಮಾಡುತ್ತಿವೆ’ ಎಂದು ಬಾಳೆ ಬೆಳೆಗಾರರಾದ ಭೂತಾಳಿ ರಾಮಣ್ಣ ಭಂಗಿ, ಶಂಕು ಮ್ಯಾಕೇರಿ ಕಷ್ಟ ವಿವರಿಸಿದರು.

ADVERTISEMENT

‘ನಾವು ಬಾಳೆ ಬೆಳೆಯಲು ಪ್ರತಿ ಎಕರೆಗೆ ₹ 50 ಸಾವಿರ ಖರ್ಚು ಮಾಡಿದ್ದೇವೆ. ಬ್ಯಾಂಕ್‌ಗಳಲ್ಲಿ ಬೆಳೆಸಾಲ ಮಾಡಿ ಕೊಳವೆ ಬಾವಿ ಕೊರೆದು ಜಿ– 9 ತಳಿಯ ಬಾಳೆಯನ್ನು ತುಂತುರು ನೀರಾವರಿ ಅಳವಡಿಸಿ ಬೆಳೆದಿದ್ದೇವೆ. ವಾರದಲ್ಲಿ ನಮ್ಮ ಕೈಗೆ ಹಣ ಸೇರಬೇಕಾಗಿತ್ತು. ಆದರೆ ಕೊರೊನಾ ಭೀತಿ ನಮಗೆ ದೊಡ್ಡ ಪೆಟ್ಟುಕೊಟ್ಟಿದೆ. ನಮಗೆ ಪ್ರತಿ ಎಕರೆಗೆ ₹ 2 ಲಕ್ಷ ಆದಾಯ ಬರುತ್ತಿತ್ತು. ಎಲ್ವನ್ನೂ ಕಳೇದು ಕೊಂಡಿದ್ದೇವೆ’ ಎಂದರು.

‘ಸರ್ಕಾರ ನಮ್ಮ ಬಾಳೆಗೊನೆಗಳಿಗೆ ಮಾರುಕಟ್ಟೆ ಒದಗಿಸಬೇಕು. ಇಲ್ಲವೇ ಬೆಳೆ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಜೀವನ ಸಾಗಿಸುವುದು ಕಷ್ ಆಗುತ್ತದೆ. ಸರ್ಕಾರ ಏನಾದರೂ ಒಂದು ಪರಿಹಾರೋಪಾಯ ನೀಡಬೇಕು’ ಎಂದು ಬಾಳೆ ಬೆಳೆಗಾರರಾದ ಬಸವರಾಜ ಬಂಗಿ, ಸುಭಾಷ್ ಬಂಗಿ ಅಭಿಪ್ರಾಯಪಟ್ಟರು.

‘ಮುಂದೆ ಹೀಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರೈತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಆದರೂ ಸಹ ಬಾಳೆ ಬೆಳೆಗಾರರು ತಮಗಾಗಿರುವ ತೊಂದರೆ ಮತ್ತು ಹಾನಿ ಬಗ್ಗೆ ತಹಶೀಲ್ದಾರ್‌ ಕಚೇರಿಗೆ, ತೋಟಗಾರಿಕೆ ಕಚೇರಿಗೆ ಅರ್ಜಿ ನೀಡಬೇಕು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವದು’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಂಕರಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.