ಕಲಬುರ್ಗಿ: ಕೊರೊನಾ ಲಾಕ್ ಡೌನ್ ನಿಂದ ತತ್ತರಿಸಿರುವ ನಿರ್ಗತಿಕರು, ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ಕೊಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಕಲಬುರ್ಗಿಯಲ್ಲಿ ಈ ಆದೇಶ ಜಾರಿಯಾಗಿಲ್ಲ.
ಮಹಾನಗರ ಪಾಲಿಕೆ ಕಳೆದ 19 ತಿಂಗಳಿಂದ ₹ 7.5 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅದು ಪಾವತಿ ಆಗುವವರೆಗೆ ಉಚಿತವಾಗಿ ಊಟ ಕೊಡಲು ಆಗುವುದಿಲ್ಲ. ಬೇಕಿದ್ದರೆ ಕ್ಯಾಂಟೀನ್ ಬಂದ್ ಮಾಡುತ್ತೇವೆ ಎಂದು ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಹಿಡಿದಿರುವವರು ಪಟ್ಟು ಹಿಡಿದಿದ್ದಾರೆ.
ಆದರೆ, ಸರ್ಕಾರದ ಆದೇಶದ ಅನುಸಾರ ಉಚಿತ ಊಟ ಕೊಡಲೇಬೇಕು ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಮಡಬೂಳ: ನಿಯಮ ಮೀರಿ ಮರಳುಗಾರಿಕೆ, ಸೇತುವೆಗೆ ಹಾನಿ
ನಗರದಲ್ಲಿರುವ ಏಳು ಇಂದಿರಾ ಕ್ಯಾಂಟೀನ್ ಗಳಲ್ಲಿ ಹಣ ಪಡೆದೇ ಊಟ, ಉಪಾಹಾರ ನೀಡುತ್ತಿರುವುದು 'ಪ್ರಜಾವಾಣಿ' ಕೆಲವು ಕ್ಯಾಂಟೀನ್ ಗಳಿಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದ ಸಂದರ್ಭದಲ್ಲಿ ಕಂಡು ಬಂತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಗುತ್ತಿಗೆದಾರ ಬಸಲಿಂಗಪ್ಪ, 'ಕಳೆದ 19 ತಿಂಗಳಿಂದ ಸಾಲ ಸೋಲ ಮಾಡಿ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದೇವೆ. ಪಾಲಿಕೆಯಿಂದ ₹ 7.5 ಕೋಟಿ ಬಾಕಿ ಬರಬೇಕಿದೆ. ಸದ್ಯಕ್ಕೆ ಐದು ತಿಂಗಳ ಬಾಕಿಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ, ಅಧಿಕಾರಿಗಳು ಬಾಕಿ ನೀಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಹೀಗಾಗಿ ಉಚಿತವಾಗಿ ಊಟ, ಉಪಾಹಾರ ಕೊಡುತ್ತಿಲ್ಲ. ಬೇಕಿದ್ದರೆ ಕ್ಯಾಂಟೀನ್ ಮುಚ್ಚುತ್ತೇವೆ' ಎಂದರು.
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, 'ಸರ್ಕಾರದ ಆದೇಶ ಪಾಲಿಸಿ ಉಚಿತ ಊಟ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಅಸಹಕಾರ ತೋರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ' ಎಂದು ಎಚ್ಚರಿಸಿದರು.
ಪ್ರಸ್ತುತ ನಗರದಲ್ಲಿ ನಿತ್ಯ ಸುಮಾರು 2,800ರಿಂದ 3 ಸಾವಿರ ಊಟ, ಉಪಾಹಾರ ಖರ್ಚಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.