ADVERTISEMENT

ಸಾಮಾಜಿಕ ಅಂತರ ಪಾಲನೆ ಮಾಡದ ಆರೋಪ: ಮುಖ್ಯ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 15:31 IST
Last Updated 9 ಏಪ್ರಿಲ್ 2020, 15:31 IST

ಅಫಜಲಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕರಜಗಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಆಹಾರ ಧಾನ್ಯ ವಿತರಣೆ ವೇಳೆ ಕೊರೊನಾ ಸೋಂಕು ತಡೆಗೆ ಮುಂಜಾಗ್ರತೆ ವಹಿಸದ ಆರೋಪದ ಮೇರೆಗೆ ಮುಖ್ಯ ಶಿಕ್ಷಕ ಅಪ್ಪಣ್ಣ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದೆ.

ಅಫಜಲಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿಯವರು ಇಲಾಖೆ ವಿಚಾರಣೆಯನ್ನು ಕಾದಿರಿಸಿ, ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸುವಾಗ ಪೋಷಕರು ಹಾಗೂ ವಿದ್ಯಾರ್ಥಿಗಳು ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ಆಹಾರ ಧಾನ್ಯಗಳನ್ನು ಹಂಚುವ ಬದಲು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಆಹಾರ ಧಾನ್ಯ ವಿತರಿಸಬೇಕು ಎಂದುಸರ್ಕಾರ ಸೂಚನೆ ನೀಡಿತ್ತು.

ADVERTISEMENT

ಕರಜಗಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಸುಮಾರು 812 ಮಕ್ಕಳಿದ್ದಾರೆ. ಗುರುವಾರ ಎಲ್ಲಾ ಮಕ್ಕಳು ಏಕ ಕಾಲಕ್ಕೆ ಅಕ್ಕಿ ಪಡೆಯಲು ಶಾಲೆಗೆ ಬಂದಿದ್ದರಿಂದ ಅಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಆಗಿರಲಿಲ್ಲ. ಪರಿಸ್ಥಿತಿ ತಿಳಿಗೊಳಿಸಲು ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಜ್ಜನ ಹಾಗೂ ಮೇಲ್ವಿಚಾರಕ ದೀಪಕ ಶೆಟ್ಟಿ ಶಾಲೆಗೆ ಭೇಟಿ ನೀಡಿದ್ದರು. ಶುಕ್ರವಾರದಿಂದ ಮಕ್ಕಳ ಮನೆ ಮನೆಗೆ ತೆರಳಿ ಆಹಾರ ಧಾನ್ಯ ಹಂಚಿಕೆ ಮಾಡಲು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.