ಚಿತ್ತಾಪುರ: ಧಾರಾಕಾರ ಮಳೆ ಹಾಗೂ ನದಿ, ಹಳ್ಳಕೊಳ್ಳಗಳಲ್ಲಿ ಉಕ್ಕಿ ಬಂದ ಪ್ರವಾಹದಿಂದ ಚಿತ್ತಾಪುರ, ಶಹಾಬಾದ್, ಕಾಳಗಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 41,229 ಹೆಕ್ಟೇರ್ (ಶೇ 45 ರಷ್ಟು) ಪ್ರದೇಶದಲ್ಲಿ ವಿವಿಧ ಮುಂಗಾರು ಬೆಳೆಗಳು ಹಾನಿಯಾಗಿವೆ.
ಜೂನ್ ಆರಂಭದಿಂದ ಮುಂಗಾರು ಮಳೆ ಅಬ್ಬರ ಹೆಚ್ಚಾಗಿ 7,077 ಹೆಕ್ಟೇರ್ (ಶೇ10ರಷ್ಟು) ಹೆಸರು ಉದ್ದು ಮತ್ತು ಶೇ2 ರಷ್ಟು ತೊಗರಿ ಬೆಳೆ ಸೇರಿ ಒಟ್ಟು 12 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿತ್ತು.
ಬಳಿಕ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಧಾರಾಕಾರ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು, ನೀರು ಹರಿದು ಹಾಗೂ ನದಿ, ಹಳ್ಳಕೊಳ್ಳಗಳಲ್ಲಿ ಭಾರಿ ಪ್ರವಾಹ ಉಕ್ಕಿ ಬಂದು ಜಮೀನುಗಳಿಗೆ ನೀರು ನುಗ್ಗಿ 25,799 ಹೆಕ್ಟೇರ್ (ಶೇ 35 ರಷ್ಟು) ಪ್ರದೇಶದಲ್ಲಿನ ಒಣ ಬೇಸಾಯ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿವೆ ಎಂದು ಕಂದಾಯ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಕಾಗಿಣಾ ನದಿಯಲ್ಲಿ ಮಂಗಳವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಭಾರಿ ಪ್ರವಾಹ ಉಕ್ಕಿ ಬಂದು ಹಾಗೂ ಎಲ್ಲಾ ಹಳ್ಳಕೊಳ್ಳಗಳು ಉಕ್ಕಿ ಹರಿದು ಅಪಾರ ಪ್ರಮಾಣದಲ್ಲಿ ತೊಗರಿ, ಹತ್ತಿ, ಕಬ್ಬು, ಬಾಳೆ ಬೆಳೆಗಳು ಹಾನಿಯಾಗಿವೆ.
ಚಿತ್ತಾಪುರ, ಶಹಾಬಾದ್, ಕಾಳಗಿ ತಾಲ್ಲೂಕುಗಳು ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. ಅತಿವೃಷ್ಟಿಯಿಂದ ಹಾಗೂ ಪ್ರವಾಹದಿಂದ ಉಂಟಾದ ಬೆಳೆ ಹಾನಿಯ ಕುರಿತು ತಾಲ್ಲೂಕು ಕಂದಾಯ ಆಡಳಿತ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಕೂಡಲೇ ಪ್ರತಿ ಹೆಕ್ಟೇರ್ ₹10 ಸಾವಿರ ಪರಿಹಾರ ನೀಡಬೇಕು ಎಂದು ಭಾಗೋಡಿ ಗ್ರಾಮದ ರೈತ ದೇವೀಂದ್ರ ಅರಣಕಲ್ ಒತ್ತಾಯಿಸಿದ್ದಾರೆ.
ರಾಶಿ ಮಾಡಲಾಗದೆ ಹಾನಿ: ತಾಲ್ಲೂಕಿನ ಮುಡಬೂಳ ಗ್ರಾಮದಿಂದ ಭಾಗೋಡಿ ಗ್ರಾಮಕ್ಕೆ ಹೋಗುವ ರಸ್ತೆಯ ಮಾರ್ಗದಲ್ಲಿ ಮುಡಬೂಳ ರೈತರ ಜಮೀನೊಂದರಲ್ಲಿ ಕಟಾವಿಗೆ ಬಂದ ಹೆಸರು ಬೆಳೆ ರಾಶಿ ಮಾಡಲಾಗದೆ ಸಂಪೂರ್ಣ ಹಾನಿಯಾಗಿದೆ. ಕಟಾವಿಗೆ ಬಂದ ಹೆಸರುಕಾಯಿ ಗಿಡದಿಂದ ಬಿಡಿಸಿಕೊಳ್ಳಬೇಕು ಮತ್ತು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಅಷ್ಟರಲ್ಲಿ ಮಳೆ ಶುರುವಾಗಿ ರಾಶಿ ಮಾಡಲಾಗದೆ ಬೆಳೆ ಮಣ್ಣು ಪಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.