ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ದತ್ತ ದೇವಸ್ಥಾನದಲ್ಲಿ ಗುರುವಾರ ಸಂಭ್ರಮದ ದತ್ತ ಮಹಾರಾಜರ ಜನ್ಮೋತ್ಸವ (ತೊಟ್ಟಿಲು ಕಾರ್ಯಕ್ರಮ) ಜರುಗಿತು.
ದತ್ತ ಜನ್ಮೋತ್ಸವದ ನಿಮಿತ್ತ ದತ್ತ ಮೂರ್ತಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಕಡಾರತಿ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಾಜರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು. ದತ್ತ ಮಹಾರಾಜರ ಜನ್ಮೋತ್ಸವದ ನಿಮಿತ್ತ ಇಡೀ ದೇವಸ್ಥಾನವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ತೊಟ್ಟಿಲು ಕಾರ್ಯಕ್ರಮದಲ್ಲಿ ಹೂ ಹಣ್ಣುಗಳನ್ನು ಅರ್ಪಿಸಿದರು.
ಇದಕ್ಕೂ ಮೊದಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಂದ ಬಂದಿದ್ದ ಭಕ್ತರು ಭೀಮಾನದಿಯ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಈ ವರ್ಷ ಭೀಮಾ ನದಿಯಲ್ಲಿ ನೀರು ಸಾಕಷ್ಟಿರುವುದರಿಂದ ಭಕ್ತರಿಗೆ ಅನುಕೂಲವಾಯಿತು. ನಂತರ ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲದಲ್ಲಿ ದರ್ಶನ ಪಡೆದರು. ದೇವಸ್ಥಾನದಲ್ಲಿ ನಿರ್ಗುಣ ಪಾದುಕೆ ಮತ್ತು ಅಶ್ವತ್ಥಕಟ್ಟೆಯ ದರ್ಶನ ಪಡೆದರು. ಆಲಯದ ಪ್ರಾಂಗಣದಲ್ಲಿ ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆ, ಮಧುಕರಿ ಮತ್ತು ಅನ್ನದಾನ ಸೇವೆಗಳು ಜರುಗಿದವು. ದೇವಸ್ಥಾನದ ಆವರಣದಲ್ಲಿ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು.
ದತ್ತು ಮಹಾರಾಜರ ತೊಟ್ಟಿಲೋತ್ಸವಕ್ಕೆ ದೇವಸ್ಥಾನದಲ್ಲಿ ಸುಮಾರು ಒಂದು ಕಿಲೋಮೀಟರ್ವರೆಗೂ ಭಕ್ತರು ಸರದಿಯಲ್ಲಿ ಗುರುವಾರ ಬೆಳಗಿನ ಜಾವ ಎರಡು ಗಂಟೆಯಿಂದ ಕಾಯುತ್ತಿದ್ದರು.
‘ನಾವು ಬೇರೆ ರಾಜ್ಯದಿಂದ ಉತ್ಸವಕ್ಕೆ ಬರುತ್ತೇವೆ. ನಮಗೆ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿಲ್ಲ.. ಸಮಿತಿಯವರು ಎಲ್ಲರಿಗೆ ದತ್ತ ಜನ್ಮೋತ್ಸವ ಹಾಗೂ ತೊಟ್ಟಿಲು ಕಾರ್ಯಕ್ರಮ ಕಾಣುವಂತೆ ವ್ಯವಸ್ಥೆ ಮಾಡಬೇಕು’ ಎಂದು ಮುಂಬೈ ಹಾಗೂ ಹೈದರಾಬಾದ್ನಿಂದ ಬಂದಿದ್ದ ಯಾತ್ರಿಕರು ಹೇಳಿದರು.
ತೊಟ್ಟಿಲೋತ್ಸವ ವೀಕ್ಷಿಸಲು ಗುರುವಾರ 3 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಬಂದಿದ್ದರು ಎಂದು ಭದ್ರತೆಯ ಉಸ್ತುವಾರಿ ಹೊತ್ತಿದ್ದ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.