ಕಲಬುರಗಿ: ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ–ಗುಲಬರ್ಗಾ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ (ಎನ್ಎಡಿಸಿಪಿ) ಎರಡನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.
ತಾಲ್ಲೂಕಿನ ಕೆರೆಬೋಸಗಾ ಗ್ರಾಮದಲ್ಲಿರುವ ನಂದಿ ಗೋಶಾಲೆಯಲ್ಲಿ ಹಸುವಿಗೆ ಪೂಜೆ ಸಲ್ಲಿಸಿ, ಬಾಳೆಹಣ್ಣು ತಿನ್ನಿಸಿದ ಶಾಸಕ, ‘ದೇಶದಾದ್ಯಂತ ಏಕಕಾಲಕ್ಕೆ ಈ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೂಡ ಗುರಿ ಮೀರಿ ಸಾಧನೆ ತೋರಲಾಗಿದೆ. ಎರಡನೇ ಸುತ್ತಿನ ಕಾರ್ಯಕ್ರಮವನ್ನೂ ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು. ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ.ಪಿ.ಎಂ.ಪ್ರಸಾದ್ ಮೂರ್ತಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ (ಕೇಶವ), ಇಲಾಖೆಯ ಉಪನಿರ್ದೇಶಕ ಡಾ.ಬಿ.ಎಸ್. ಪಾಟೀಲ, ನಂದಿ ಗೋ ಶಾಲೆಯ ಅಧ್ಯಕ್ಷ ಬಸವರಾಜ ಉಪ್ಪಿನ, ಪಯೋನಿಧಿ ಗೋ ಶಾಲೆಯ ಕೃಷ್ಣ ಕೆಂಭಾವಿ, ಇಲಾಖೆಯ ಪಶುವೈದ್ಯಾಧಿಕಾರಿ (ತಾಂತ್ರಿಕ) ಡಾ. ಯಲ್ಲಪ್ಪ ಇಂಗಳೆ, ಸಹಾಯಕ ನಿರ್ದೇಶಕ ಡಾ.ಎಸ್.ಕೆ. ಟಕ್ಕಳಕಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ದೇವಿಂದ್ರಪ್ಪ ಬಿರೇದಾರ, ಶರಣ ಸಿರಸಗಿ ಪಶು ವೈದ್ಯಾಧಿಕಾರಿ ವೈಜನಾಥ್ ಮಮ್ಮಾಣಿ ಮತ್ತು ಡಾ.ಪರಿಮಳಾ ಇದ್ದರು.
ಒಂದೇ ಸ್ಥಳದಲ್ಲಿ 300ಕ್ಕೂ ಅಧಿಕ ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.