ಜಿಡಗಾ (ಆಳಂದ): ತಾಲ್ಲೂಕಿನ ಜಿಡಗಾ ಮಠದಲ್ಲಿ ಶಿವಯೋಗಿ ಸಿದ್ಧರಾಮರ 17ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಪಾರ ಭಕ್ತರ ಮಧ್ಯೆ ವೈಭವದಿಂದ ನೆರವೇರಿತು.
ರಾಜ್ಯವೂ ಸೇರಿದಂತೆ ನೆರೆಯ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಿಂದ ಅಪಾರ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಸಂಪ್ರದಾಯದಂತೆ ಗುರುವಾರ ನಸುಕಿನಿಂದಲೇ ಮಠದ ಗರ್ಭಗುಡಿ ಹಾಗೂ ಸಿದ್ಧರಾಮರ ಕರ್ತೃ ಗದ್ದುಗೆಯಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು.
ಮಠದ ಈಗಿನ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಶಿವಯೋಗಿಗಳು ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಯ ಗೋಪುರದ ಮೇಲಿನ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಪೀಠದ ಸುತ್ತ ಸೇರಿದ್ದ ಅಪಾರ ಭಕ್ತರು ಚಪ್ಪಾಳೆ ತಟ್ಟಿ, ಸಿಳ್ಳೆ, ಕೇಕೆ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಶಿವಯೋಗಿಗಳಿಗೆ ಜಯವಾಗಲಿ ಎಂದು ಘೋಷಣೆ ಮೊಳಗಿಸಿದರು. ವಿವಿಧ ವಾದ್ಯಮೇಳಗಳ ತಂಡಗಳು ಮಂಗಳನಾದ ನುಡಿಸಿದವು. ಈ ಮೂಲಕ ನಿರಂತರ ಶಿವನಾಮ ಜಪ ಭಜನೆಗೂ ಪೂಜ್ಯರು ಮುಕ್ತಾಯ ಹಾಡಿದರು.
ನಂತರ ನಡೆದ ಧರ್ಮಸಭೆಯಲ್ಲಿ ಶಶಿಧರ ಶಾಸ್ತ್ರಿಗಳು ‘ಶರಣಬಸವೇಶ್ವರರ ಮಹಾತ್ಮೆ’ ಕುರಿತು ಪ್ರವಚನ ಹೇಳಿದರು. ಭಕ್ತ ಸಮೂಹದಿಂದ ಮುರುಘರಾಜೇಂದ್ರ ಶೀಗಳ ತುಲಾಭಾರ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.