ಸೇಡಂ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆಯದೇ ಭೂಮಿಯಲ್ಲಿಯೇ ಉಳಿಯುತ್ತಿವೆ.
ಇಂದಲ್ಲಾ ನಾಳೆ ಮಳೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿ ರೈತರು ಆಕಾಶ ನೋಡುತ್ತಿದ್ದಾರೆ. ಕಳೆದ 10 ದಿನಗಳಿಂದ ಮಳೆಯಾಗಿಲ್ಲ. ಈ ಹಿಂದೆ ಸುರಿದ ಮಳೆಗೆ ಹದವಾದ ಭೂಮಿ ಕಲ್ಲು ಬಂಡೆಯಂತಾಗಿದ್ದು ಬೀಜ ಮೊಳಕೆಯೊಡೆಯುವ ಸಂಭವವಿಲ್ಲ.
ತಾಲ್ಲೂಕಿನ ಮಳಖೇಡ, ಕೋಡ್ಲಾ, ಹಂದರಕಿ, ಮುಧೋಳ, ಆಡಕಿ, ಕುರಕುಂಟಾ, ಇಟಕಾಲ್, ರಿಬ್ಬನಪಲ್ಲಿ, ಹೈಯ್ಯಾಳ, ತೆಲ್ಕೂರ, ಮೀನಹಾಬಾಳ, ಕುಕ್ಕುಂದಾ, ಯಡಗಾ, ಬಿಜನಳ್ಳಿ, ನೀಲಹಳ್ಳಿ, ಅಳ್ಳೊಳ್ಳಿ, ರಂಜೋಳ, ಕಾನಗಡ್ಡಾ, ಮದಕಲ್, ಲಿಂಗಂಪಲ್ಲಿ, ಕೋಲ್ಕುಂದಾ, ದುಗನೂರ, ಮೈಲ್ವಾರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ಅರ್ಧದಷ್ಟು ಮುಗಿದಿದೆ. ಭರದಿಂದ ಸಾಗಿದ ಬಿತ್ತನೆ ಕಾರ್ಯಕ್ಕೆ ಕೊಂಚ ತಡೆಯೊಡ್ಡಿದಂತಾಗಿದೆ. ಈಗಾಗಲೇ ಬಿತ್ತನೆಯ ಕಾರ್ಯವೂ ಪೂರ್ಣಗೊಂಡಿದೆ. ಕೆಲವು ಗ್ರಾಮಗಳಲ್ಲಿ ಬಿತ್ತಿದ ಬೀಜವು ಮೊಳಕೆಯೊಡೆದು, ಎರಡು ಎಲೆ ಚಿಗುರಿದೆ. ಕೆಲವು ಕಡೆಗಳಲ್ಲಿ ಬಿತ್ತಿ ಅನೇಕ ದಿನಗಳಾದರೂ ಸಹ ಬೀಜವು ಭೂಮಿಯಲ್ಲಿಯೇ ಇದ್ದು, ಮೊಳಕೆಯುತ್ತಿಲ್ಲ’ ಎನ್ನುತ್ತಾರೆ ಕುಕ್ಕುಂದಾದ ರೈತ ವೀರಭದ್ರಪ್ಪ.
ತಾಲ್ಲೂಕಿನಲ್ಲಿ ಶೇ 90ರಷ್ಟು ರೈತರು ಮಳೆಯಾಶ್ರಿತ ಒಣಬೇಸಾಯವನ್ನು ಆಶ್ರಯಿಸಿದ್ದಾರೆ. ವಾಣಿಜ್ಯ ಬೆಳೆ ತೊಗರಿ, ಹೆಸರು ಮತ್ತು ಉದ್ದು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ.
ಕೆಲವರು ರೈತರು ಹೆಸರು ಮಾತ್ರ ಬಿತ್ತನೆ ಮಾಡಿದ್ದರೆ, ಕೆಲವರು ಹೆಸರು-ತೊಗರಿ ಮತ್ತು ಉದ್ದು-ತೊಗರಿ ಮಿಶ್ರ ಬೆಳೆಯನ್ನು ಬಿತ್ತಿದ್ದಾರೆ.
ಕೋಲ್ಕುಂದಾ, ಮುಧೋಳ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಆ ಭಾಗದಲ್ಲಿ ಭೂಮಿಯಲ್ಲಿ ಇನ್ನೂ ಹಸಿ ಇದೆ. ಆರಂಭದಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ರೋಹಿಣಿ ಮಳೆ ಈಗ ಆತಂಕಕ್ಕೆ ಕಾರಣವಾಗಿದೆ.
ಲಾಕ್ಡೌನ್ನಿಂದ ತತ್ತರಿಸುವ ರೈತಾಪಿ ವರ್ಗಕ್ಕೆ ಮಳೆಯ ಕೊರತೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮುಂಗಾರು ಬೀಜ ಬೇಗನೇ ಹಾಕಿದ್ದರೆ, ಬೇಗನ ಫಸಲು ಬಂದು, ಅಧಿಕ ಇಳುವರಿ ಪಡೆಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕೊಂಚ ನಿರಾಸೆಯಾಗುತ್ತಿದೆ. ಮಳೆಯಾಗದಿರುವುದು ರೈತರಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.