ಕಲಬುರ್ಗಿ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಕೈ ಬಿಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಸಮಿತಿಯ ಪದಾಧಿಕಾರಿಗಳು, ‘ಕಾಯ್ದೆ ತಿದ್ದುಪಡಿಯಿಂದ ರೈತರು ಹಾಗೂ ಎಪಿಎಂಸಿ ಹಮಾಲರು ಬೀದಿಗೆ ಬೀಳುತ್ತಾರೆ. ಕಾರ್ಪೊರೇಟ್ ಕಂಪನಿಗಳು ಮಿತಿ ಇಲ್ಲದೇ ರೈತರ ಜಮೀನು ಖರೀದಿ ಮಾಡಲು ಇದು ಅವಕಾಶ ನೀಡುತ್ತದೆ’ ಎಂದೂ ದೂರಿದರು.
ರೈತರ ನೀರಾವರಿ ಪಂಪ್ಸೆಟ್ಗಳು, ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಲ್ಲಿ ಉಚಿತ ವಿದ್ಯುತ್ ನೀಡುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ‘ವಿದ್ಯುತ್ ಕಾಯ್ದೆ–2003’ಕ್ಕೆ ತಿದ್ದುಪಡಿ ತರುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು. ಅಗತ್ಯ ವಸ್ತುಗಳ ಕಾಯ್ದೆ–2020 ಮೂಲಕ ಉಳ್ಳವರು ಅಕ್ರಮ ದಾಸ್ತಾನು ಮಾಡಲು ಅನುಕೂಲ ಮಾಡಲಾಗುತ್ತಿದೆ. ಹಾಗಾಗಿ, ಈ ಮೂರೂ ನಿರ್ಧಾರಗಳಿಂದ ರಾಜ್ಯ ಸರ್ಕಾರ ದೂರ ಸರಿಯಬೇಕು ಎಂದು ಆಗ್ರಹಿಸಿದರು.
ಸಣ್ಣ ರೈತರು, ಕಾರ್ಮಿಕರು, ಪರಿಶಿಷ್ಟರು ಸಾಗುವಳಿ ಮಾಡುತ್ತಿರುವ ಕಂದಾಯ ಭೂಮಿಯನ್ನು ನಗರ ಮಿತಿಯ ಷರತ್ತು ವಿಧಿಸದೇ ಸಕ್ರಮಗೊಳಿಸಬೇಕು. ಕೃಷಿ ಯೋಗ್ಯವಾದ, ಮರಗಳಿಲ್ಲದ ಅರಣ್ಯ ಭೂಮಿಯನ್ನು ಸಾಗುವಳಿಗೆ ನೀಡಬೇಕು. ಉದ್ಯೋಗ ಖಾತ್ರಿ ಅಡಿ ಎಲ್ಲ ಗ್ರಾಮಗಳಲ್ಲೂ ಕೆಲಸ ನೀಡಬೇಕು ಎಂದೂ ಆಗ್ರಹಿಸಿದರು.
ಸಮಿತಿ ಮುಖಂಡರಾದ ಮಾರುತಿ ಮಾನ್ಪಡೆ, ಮೌಲಾ ಮುಲ್ಲಾ, ಭೀಮಾಶಂಕರ ಮಾಡ್ಯಾಳ, ಜಗದೇವಿ ಹೆಗಡೆ, ಶರಣಬಸಪ್ಪ ಮಮಶೆಟ್ಟಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.