
ಯಡ್ರಾಮಿ: 2025-26ನೇ ಸಾಲಿನ ಕಬ್ಬಿನ ದರ ನಿಗದಿ ಮಾಡುವುದರ ಜತೆಗೆ ರೈತರ ವಿವಿಧ ಸಮಸ್ಯೆಗಳ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಿಸಿಲು ನಾಡಿನ ಹಸಿರು ಸೇನೆ, ಕ.ರ.ವೇ (ಪ್ರವೀಣ ಶೆಟ್ಟಿ ಬಣ) ಮತ್ತು ಸಮಸ್ತ ಕಬ್ಬು ಬೆಳೆಗಾರರ ಸಹಭಾಗಿತ್ವದಲ್ಲಿ ಶುಕ್ರವಾರ ತಾಲ್ಲೂಕಿನ ಮಳ್ಳಿ-ನಾಗರಹಳ್ಳಿ ದಿ ಉಗರ್ ಸುಗರ್ ಕಾರ್ಖಾನೆ ಮುಂಭಾಗ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಲಾಯಿತು.
ನಾಗರಹಳ್ಳಿ ವೃತ್ತದಿಂದ ಸಕ್ಕರೆ ಕಾರ್ಖಾನೆವರೆಗೆ ಸಾವಿರಾರು ರೈತರ ಟ್ರ್ಯಾಕ್ಟರ್ಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಸುಮಾರು ಮೂರು ತಾಸು ಸಿಂದಗಿಗೆ ತೆರಳುವ ರಸ್ತೆ ಬಂದ್ ಮಾಡಿದ ಪ್ರತಿಭಟನಾಕಾರರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕಾಧ್ಯಕ್ಷ ಈರಣ್ಣ ಭಜಂತ್ರಿ ಮಾತನಾಡಿ, ‘ಬೆಳಗಾವಿ ಮಾದರಿಯಲ್ಲಿ ಪತಿ ಟನ್ ಕಬ್ಬಿಗೆ ₹3,500 ದರ ನಿಗದಿ, 2022-23 ಮತ್ತು 2023-24ನೇ ಸಾಲಿನ ರೈತರ ಕಬ್ಬಿನ ಬಾಕಿ ಮೊತ್ತ ಪಾವತಿ, ಮಷಿನ್ನಿಂದ ಕಟಾವು ಮಾಡಿದ ಕಬ್ಬಿಗೆ ಶೇ 5ರಷ್ಟು ತೂಕದಲ್ಲಿ ಕಟಾವಣೆ ಮಾಡುವುದನ್ನು ನಿಲ್ಲಿಸಬೇಕು‘ ಎಂದು ಹೇಳಿದರು.
‘ಚಾಲಕರಿಗೆ ಮತ್ತು ರೈತರಿಗೆ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟಿನ, ರಾತ್ರಿ ವಾಸ್ತವ್ಯಕ್ಕೆ ರೈತಭವನ ನಿರ್ಮಾಣ, ಶಹಾಪೂರ-ಸಿಂದಗಿ ಮುಖ್ಯ ರಸ್ತೆಯಿಂದ ಸಕ್ಕರೆ ಕಾರ್ಖಾನೆ ರವರೆಗೆ ರಸ್ತೆ ಅಭಿವೃದ್ಧಿ, ಕಟಾವಣೆ ಆರ್ಡರನ್ನು ಹತ್ತು ದಿನ ಮುಂಚಿತವಾಗಿ ನೀಡುವುದು ಸೇರಿದಂತೆ ರೈತರ ಇತರ ಬೇಡಿಕೆಗಳನ್ನು ಈಡೇರಿಸಬೇಕು‘ ಎಂದರು.
ಬಿಸಿಲು ನಾಡಿನ ಹಸಿರು ಸೇನೆ ರಾಜ್ಯಾಧ್ಯಕ್ಷ ಶಫೀಉಲ್ಲಾ ಎಂ.ದಖನಿ, ಕ.ರ.ವೇ ಮುಖಂಡ ಸಾಹೇಬಗೌಡ ದೇಸಾಯಿ, ತಾಲ್ಲೂಕು ಗೌರವಾಧ್ಯಕ್ಷ ಸಾಂಬಶಿವ ಎಂ. ಹಿರೇಮಠ, ಮಲ್ಲನಗೌಡ ಪಾಟೀಲ ಕೆಲ್ಲೂರ, ಅಲ್ಲಾಪಟೇಲ್ ಇಜೇರಿ, ಮಹಾದೇವ ಬೇವಿನಾಳ, ಎಚ್.ಆರ್ ಬಡಿಗೇರ, ಮಲ್ಲನಗೌಡ ಅದ್ನೂರ, ಮಲ್ಲನಗೌಡ ಪಾಟೀಲ, ಮಳ್ಳಿ ಗ್ರಾ.ಪಂ ಅಧ್ಯಕ್ಷ ಬಸನಗೌಡ ಪಾಟೀಲ, ಶ್ರೀಧರ್ ಕುಳಗೇರಿ, ಪರಮಾನಂದ ಯಲಗೋಡ, ಚನ್ನು ಕಾಚಾಪುರ, ಗುರಣ್ಣ ಕಾಚಾಪುರ, ಶ್ರೀಶೈಲ ವಿ ಚಿಕ್ಕಮಠ, ಸಂಗನಬಸಯ್ಯ ವಿ ಚಿಕ್ಕಮಠ, ಪ್ರಭುಗೌಡ ಎಮ್ ಬಿರಾದಾರ, ಮಲ್ಲಯ್ಯ ಹಿರೇಮಠ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.