ಕಲಬುರಗಿ: ‘ಬ್ರಾಹ್ಮಣ, ಲಿಂಗಾಯತ, ಎಸ್ಸಿ, ಎಸ್ಟಿ, ನಾಯಕ ಎಂದು ಬೇರೆ ಬೇರೆ ಜಾತಿಗಳ ಹೆಸರು ಹೇಳುವುದು ಬಿಟ್ಟು ಒಂದೇ ಎಂಬ ಭಾವ ಬರಬೇಕು’ ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಇಲ್ಲಿನ ಕೋಟೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮಹೋತ್ಸವದಲ್ಲಿ ಸೋಮವಾರ ಹಮ್ಮಿಕೊಂಡ ಮಾತೆಯರಿಂದ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
‘ಜಾತಿ ನಮ್ಮ ಮನೆಯ ಜಗಲಿಯಲ್ಲಿ ಇರಲಿ. ಬಾಗಿಲು ಹೊರಗೆ ಹೋಗುವಾಗ ಜಾತಿ, ರಾಜಕೀಯ ಬಿಟ್ಟು, ಕೇಸರಿ ಶಾಲು, ಹಣೆಗೆ ತಿಲಕ ಇಟ್ಟು ಹೊರಬರಬೇಕು. ಜಾತಿ ಬಿಟ್ಟಾಗ ಮಾತ್ರ ಹಿಂದೂಗಳು ಸಂಘಟಿತರಾಗಲು ಸಾಧ್ಯ. ಸಂಘಟಿತರಾಗದೆ ಧರ್ಮ, ರಾಷ್ಟ್ರ ರಕ್ಷಣೆ ಅಸಾಧ್ಯ’ ಎಂದರು.
‘ಕೆಲವು ಬುದ್ಧಿ ಜೀವಿಗಳು ಜಾತಿ ವ್ಯವಸ್ಥೆ ಬಗ್ಗೆ ವ್ಯವಸ್ಥಿತವಾಗಿ ಸುಳ್ಳು ಹರಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲ. ವೇದ ರಚಿಸಿದ ಹಲವು ಋಷಿಗಳು ಬ್ರಾಹ್ಮಣರಲ್ಲ. ವೇದವೇ ಜಾತಿ ಹೇಳಿದೆ ಎಂದರೆ ನಂಬಬೇಕಾ’ ಎಂದು ಪ್ರಶ್ನಿಸಿದರು.
‘ರಾಮ ಮಂದಿರಕ್ಕೆ ಅಡಿಗಲ್ಲು ಇಟ್ಟಿದ್ದು, ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದು, ಅಯೋಧ್ಯೆ ಮಂದಿರದ ಅರ್ಚಕರು ಇದ್ದಾರೆ. ಹಿಂದೂಗಳ ನಿರ್ಲಕ್ಷ್ಯ ಸ್ವಾರ್ಥದಿಂದ ಹಲವು ಬಾರಿ ಪೆಟ್ಟು ತಿಂದಿದ್ದೇವೆ. ತಕ್ಷಶಿಲಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ಥಾನ, ಕಾಶ್ಮೀರ ಬಿಟ್ಟು ಬಂದಿದ್ದೇವೆ. ಹೀಗೆ ಮುಂದುವರಿದರೆ ನಮ್ಮ ಊರು ಬಿಡುವ ಸ್ಥಿತಿ ಬರಲಿದೆ. ಒಂಬತ್ತು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ’ ಎಂದು ಹೇಳಿದರು.
ಪ್ರಣಾವನಂದ ಸ್ವಾಮೀಜಿ ಮಾತನಾಡಿ, ‘ಸಾಮೂಹಿಕ ಆರಾಧನೆ, ಮಂಗಲಾರತಿ ಮಾಡುವುದರಿಂದ ಸಂಘಟನೆಯ ಶಕ್ತಿ ಬರುತ್ತದೆ. ಬಹಿರಂಗವಾಗಿ ತಾಯಿಯಂದಿರು ಬಂದು ಧರ್ಮದ ಶಕ್ತಿ ತೋರಬೇಕು’ ಎಂದರು.
ಹಿಂದೂ ಮಹಾಗಣಪತಿಗೆ ನಗರದ ವಿವಿಧೆಡೆಯಿಂದ ಬಂದಿದ್ದ ನೂರಾರು ಮಹಿಳೆಯರಿಂದ ಸಾಮೂಹಿಕ ಮಹಾಮಂಗಳಾರತಿ ನೆರವೇರಿದಿರು.
ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಪ್ರಿಯಾಂಕಾ ಸಿ.ಪಾಟೀಲ, ಲಕ್ಷ್ಮಿ ಸಿ. ಪಾಟೀಲ ರೇವೂರ, ಮೇಘಾ ಪಾಟೀಲ, ಸುಮಂಗಲಾ ಚಕ್ರವರ್ತಿ, ಪೂರ್ಣಿಮಾ ಹೊಸಳ್ಳಿಕರ್, ನಾಗೇಂದ್ರ ಕಬಾಡೆ, ಸುರೇಶ ಟೆಂಗಳಿ, ಮಲ್ಲಿಕಾರ್ಜುನ ಗಂಗಾ, ಸಿದ್ದರಾಜ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.