ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಅವರಿಗೆ ಸೇರಿದ ಲಾಕರ್ನಲ್ಲಿ ಅರ್ಧ ಕೆಜಿ ಚಿನ್ನ ಇರುವುದು ಪತ್ತೆಯಾಗಿದೆ. ಸಿಐಡಿ ಅಧಿಕಾರಿಗಳು ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿನ ಲಾಕರ್ ತೆಗೆಸಿ ನೋಡಿದಾಗ, ಚಿನ್ನ ಇಟ್ಟಿರುವುದು ಗೊತ್ತಾಗಿದೆ.
ರುದ್ರಗೌಡ ಅವರನ್ನು ಬ್ಯಾಂಕ್ಗೆ ಕರೆದೊಯ್ದ ಸಿಐಡಿ ಅಧಿಕಾರಿಗಳು ಅವರ ಸಮ್ಮುಖದಲ್ಲಿ ಶನಿವಾರ ಲಾಕರ್ ತೆಗೆಸಿದರು. ಮತ್ತೊಂದು ಲಾಕರ್ ಪರಿಶೀಲಿಸಬೇಕಿದ್ದು, ಸೋಮವಾರ ಪುನಃ ಆರೋಪಿಯನ್ನು ಬ್ಯಾಂಕ್ಗೆ ಕರೆದೊಯ್ಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಬೇರೆಯವರ ಬಳಿ ಹಣ: ‘ಐದಾರು ವರ್ಷಗಳಿಂದ ಅಕ್ರಮ ನೇಮಕಾತಿ ವ್ಯವಹಾರದಲ್ಲಿ ಪಳಗಿರುವ ರುದ್ರಗೌಡ ಎಲ್ಲ ಹಣ ಬ್ಯಾಂಕ್ನಲ್ಲಿ ಇಟ್ಟರೆ ಐಟಿ ಅಧಿಕಾರಿಗಳಿಗೆ ಲೆಕ್ಕ ತೋರಿಸುವುದು ಕಷ್ಟವಾಗಲಿದೆ ಎಂಬುದನ್ನು ಅರಿತಿದ್ದ. ಅದಕ್ಕೆ ದಂದೆಯಿಂದ ಗಳಿಸಿದ ಹಣ
ವನ್ನು ತನ್ನ ಆಪ್ತರ ಬಳಿ ಕೊಟ್ಟಿರಬಹುದು ಎಂಬ ಶಂಕೆ ಇದೆ. ಅಂತಹ ಒಬ್ಬ ವ್ಯಕ್ತಿ ರುದ್ರಗೌಡ ಪಾಟೀಲ ಬಂಧನವಾದ ದಿನದಿಂದ ಅಫಜಲಪುರ ತಾಲ್ಲೂಕಿನ ಗ್ರಾಮವೊಂದರ ತನ್ನ ಮನೆಗೆ ಕೀಲಿ ಹಾಕಿ ನಾಪತ್ತೆಯಾಗಿದ್ದಾನೆ’ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.