
RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್ ಖರ್ಗೆ ಲೇವಡಿ
ಕಲಬುರಗಿ: 'ರಾಜ್ಯಪಾಲರಿಗೆ ಬರೆದುಕೊಟ್ಟ ಭಾಷಣದಲ್ಲಿ ಕೇಂದ್ರದ ವಿರುದ್ದ ಯಾವುದೇ ಅವಹೇಳನಾಕಾರಿ ಮಾತುಗಳಿರಲಿಲ್ಲ. ಅವರು ಭಾಷಣ ಓದದ ನಿರ್ಗಮಿಸಿದ್ದು ಸರಿಯಲ್ಲ. ರಾಜ್ಯಪಾಲರದ್ದು ಸಂವಿಧಾನ ವಿರೋಧಿ ನಡೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 'ಬಿಜೆಪಿ ಆರ್ಎಸ್ಎಸ್ ಕೈಗೊಂಬೆ. ಆರ್ಎಸ್ಎಸ್ ಇಲ್ಲದಿದ್ದರೆ ಬಿಜೆಪಿ ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆಯಾಗುತ್ತದೆ. ಬಿಜೆಪಿಗೆ ಸ್ವಂತ ಬಲ್ಲವಿಲ್ಲ. ಹೀಗಾಗಿಯೇ ಬಿಜೆಪಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನದ ಬಗೆಗೆ ಒಂಚೂರು ಗೌರವವಿಲ್ಲ. ಕಳೆದ ಎರಡ್ಮೂರು ದಿನಗಳಿಂದ ವಿಧಾನಮಂಡಲ ಅಧಿವೇಶನದಲ್ಲಿ ಇದ್ದು ಕಾಣುತ್ತಿದೆ' ಎಂದು ಟೀಕಿಸಿದರು.
'ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್' ರಾಜ್ಯಪಾಲರಿಗೆ ಅಡ್ಡ ಹಾಕಿ ಅವಮಾನ ಮಾಡಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸುವುದಾದರೆ, ಬರೀ 37ಸೆಕೆಂಡ್ ಭಾಷಣ ಓದಿದ ರಾಜ್ಯಪಾಲರು ಅದನ್ನೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಭಾಷಣದಲ್ಲಿದ್ದ ಜೈಹಿಂದ್, ಜೈ ಕರ್ನಾಟಕ ಮಾತ್ರವೇ ಹೇಳಿ, ಜೈ ಸಂವಿಧಾನ ಎಂಬುದನ್ನೂ ಹೇಳಿಲ್ಲ.
ರಾಷ್ಟ್ರಗೀತೆ ಮೊಳಗುವ ತನಕವೂ ಕಾಯದೇ ಸದನದಿಂದ ಹೊರನಡೆದ ರಾಜ್ಯಪಾಲರ ವಿರುದ್ಧ ಏನು ಕ್ರಮಕೈಗೊಳ್ಳಬೇಕು? ರಾಷ್ಟ್ರಗೀತೆ ಅವಮಾನಿಸಿದವರ ವಿರುದ್ಧ ಕ್ರಮ ಏನು ಎಂಬುದರ ಬಗೆಗೆ ಸಂವಿಧಾನ, ಭಾರತೀಯ ನ್ಯಾಯ ಸಂಹಿತೆಯಲ್ಲಿ ಸ್ಪಷ್ಟ ಮಾನದಂಡಗಳಿವೆಲ್ಲ, ಅದರ ಬಗೆಗೆ ಬಿಜೆಪಿ ಯಾಕೆ ಮಾತನಾಡಲ್ಲ? ರಾಷ್ಟ್ರಗೀತೆ ಅವಮಾನಿಸಿದವರಿಗೆ ನೀವೇನು ಭಾರತ ರತ್ನ ಕೊಡುತ್ತೀರಾ? ಅವರ ವಜಾ ಆಗಬೇಕಲ್ಲವೇ?' ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.