ಕಮಲಾಪುರ (ಕಲಬುರ್ಗಿ ಜಿಲ್ಲೆ): ಚಿಹ್ನೆ ಬದಲಾವಣೆಯಾಗಿದ್ದರಿಂದ ತಾಲ್ಲೂಕಿನ ಶ್ರೀಚಂದ್ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್ನಲ್ಲಿ ಮತದಾನ ಸ್ಥಗಿತಗೊಂಡಿದೆ.
'ನನಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಈಗಾಗಲೇ ಇದೇ ಚಿಹ್ನೆ ಮೂಲಕ ಪ್ರಚಾರ ಕೈಗೊಂಡಿದ್ದೇನೆ. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಪ್ರಿಂಟ್ ಆಗಿದೆ' ಎಂದು ಅಭ್ಯರ್ಥಿ ಗಜಾನಂದ ದತ್ತಾಪ್ರಸಾದ ಎಂಬುವವ ತಕರಾರು ತೆಗೆದಾಗ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿದೆ.
ಗಜಾನಂದ ತಮ್ಮ ಪ್ರಚಾರ ಪತ್ರದಲ್ಲಿ ಟೂತ್ ಪೇಸ್ಟ್ ಚಿಹ್ನೆ ಹಾಕಿಕೊಂಡು ಪ್ರಚಾರ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಮತ ಚಲಾಯಿಸಲು ಹೋದ ಮತದಾರರೊಬ್ಬರು ಗಮನಿಸಿದ್ದಾರೆ. ಚಿಹ್ನೆ ಕಾಣದೆ ದಂಗಾಗಿದ್ದಾರೆ. ಹೊರಗೆ ಬಂದು ಅಭ್ಯರ್ಥಿಗೆ ‘ನೀನು ಟೂತ್ ಪೇಸ್ಟ್ ಗೆ ಮತ ಚಲಾಯಿಸಲು ಹೇಳಿದ್ದು, ಆದರೆ ಅಲ್ಲಿ ಈ ಚಿಹ್ನೆ ಇಲ್ಲ. ಬರಿ ಟೂತ್ ಬ್ರಷ್ ಇದೆ’ ಎಂದಿದ್ದಾರೆ.
ಆಗ ಅಭ್ಯರ್ಥಿ ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಅಷ್ಟಕ್ಕೆ ಚುನಾವಣೆ ಸ್ಥಗಿತ ಗೊಳಿಸಲಾಗಿದೆ. ಈ ವಾರ್ಡ್ ನಲ್ಲಿ 2 ಸ್ಥಾನಗಳಿದ್ದು, 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂಬಾರಾಯ ಶಿವರುದ್ರಪ್ಪ ಆಟೊ, ಕಲ್ಯಾಣರಾವ ಚಿತಾನಂದ ಟ್ರ್ಯಾಕ್ಟರ್, ಕಸ್ತೂರಿಬಾಯಿ ಸಾಯಬಣ್ಣ ಚಹಾ ಕಿಟ್ಲಿ, ಚನ್ನಮ್ಮ ದೇವಿಂದ್ರ ಬ್ಯಾಟರಿ (ಟಾರ್ಚ್), ಪ್ರಸಾದ ಶ್ರೀಮಂತ ಬಕೆಟ್, ಪುತಳಾಬಾಯಿ ಪಾಂಡಪ್ಪ ತೆಂಗಿನ ತೋಟ, ಹಾಗೂ ನಾಲ್ಕನೇ ಕ್ರಮ ಸಂಖ್ಯೆಯಲ್ಲಿರುವ ಗಜಾನಂದ ಅವರಿಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಶ್ ಮುದ್ರಣಗೊಂಡಿದೆ.
ನಮ್ಮ ಪ್ರಕಾರ ಚಿಹ್ನೆ ಸರಿಯಾಗಿದೆ. ಫಾರಂ ಸಂಖ್ಯೆ 10 ರಲ್ಲಿ 139 ಹಲ್ಲುಜ್ಜುವ ಬ್ರಷ್ ಅಂತಲೆ ನಮೂದಾಗಿದೆ ಎಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿ ದೂರು ನೀಡಲಿ ಪರಿಶೀಲಿಸುತ್ತೇವೆ. ಚುನಾವಣೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಹಶೀಲ್ದಾರ್ ರಮೇಶ ಪೆದ್ದೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.