ADVERTISEMENT

ವಕೀಲ ವೆಂಕಟೇಶ್ ‌ಹತ್ಯೆ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 9:49 IST
Last Updated 1 ಮಾರ್ಚ್ 2021, 9:49 IST
ಗುಲಬರ್ಗಾ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ
ಗುಲಬರ್ಗಾ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ   

ಕಲಬುರ್ಗಿ: ವಿಜಯನಗರ (ಹೊಸಪೇಟೆ) ನ್ಯಾಯಾಲಯ ಆವರಣದಲ್ಲಿ ಹಿರಿಯ ವಕೀಲ ಡಾ. ತಾರಿಹಳ್ಳಿ ವೆಂಕಟೇಶ ಅವರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಸೋಮವಾರ ಗುಲಬರ್ಗಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಸರ್ದಾರ್ ‌ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ‌ಕಚೇರಿಯವರೆಗೆ ಘೋಷಣೆ ‌ಕೂಗುತ್ತಾ ಮೆರವಣಿಗೆ ‌ನಡೆಸಿದರು. ವಕೀಲರಿಗೆ ಸೂಕ್ತ ಭದ್ರತೆ ಮತ್ತು ಕೊಲೆಗಾರನಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಹೊಸಪೇಟೆಯ ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ತಾರಿಹಳ್ಳಿ ಅವರನ್ನು ಕೊಲೆ ಮಾಡಲಾಗಿದೆ. ನ್ಯಾಯಕ್ಕಾಗಿ ಬಡಿದಾಡುವ, ಕಕ್ಷಿದಾರರ ಪರವಾಗಿ ವಾದ ಮಾಡುವುದು ವಕೀಲರ ಕೆಲಸ. ಅಂತಹ ಕೆಲಸದಲ್ಲೂ ಈಗ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ವಕೀಲರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಪೊಲೀಸ್ ಬಲ ಇನ್ನಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣಿ, ಉಪಾಧ್ಯಕ್ಷ ರಾಜಶೇಖರ ಡೊಂಗರಗಾಂವ್, ಪ್ರಧಾನ ಕಾರ್ಯದರ್ಶಿ ಶರಣಬಸವ ಪಸ್ತಾಪುರ, ಜಂಟಿ ಕಾರ್ಯದರ್ಶಿ ಶಿವಾನಂದ ಹಿಡೆ, ಸಂತೋಷ ಬಿ.ಪಾಟೀಲ, ಹಣಮಂತರಾಯ ಅಟ್ಟೂರ, ರಾಜಕುಮಾರ ಕಡಗಂಚಿ, ಬಸವರಾಜ ನಾಸಿ, ದಿಲೀಪ ತೇಲಕರ್, ವಿನೋದಕುಮಾರ ಜನೆವರಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.