ADVERTISEMENT

ಆ 13ರಿಂದ 15ರವರೆಗೆ ತಿರಂಗಾ ಅಭಿಯಾನ

ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 9:58 IST
Last Updated 1 ಆಗಸ್ಟ್ 2022, 9:58 IST
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿದರು. ಮೋನಾ ರೋತ್, ಭುವನೇಶ ಪಾಟೀಲ, ಡಾ. ಗಿರೀಶ್ ಬದೋಲೆ ಇದ್ದರು
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿದರು. ಮೋನಾ ರೋತ್, ಭುವನೇಶ ಪಾಟೀಲ, ಡಾ. ಗಿರೀಶ್ ಬದೋಲೆ ಇದ್ದರು   

ಕಲಬುರಗಿ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಇದೇ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಕೈಗೊಂಡಿದ್ದು, ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಡಿ.ಸಿ. ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಡಿ.ಸಿ. ಯಶವಂತ ವಿ. ಗುರುಕರ್, ಆಗಸ್ಟ್ 4ರಂದು ತಾಲ್ಲೂಕು ಮಟ್ಟದ ಶಾಲೆಗಳಲ್ಲಿ ಸ್ವಾತಂತ್ರ ದಿನದ ಮಹತ್ವದ ಕುರಿತು ರಸಪ್ರಶ್ನೆ, ಆ 8ರಂದು ಕಲಬುರಗಿ ನಗರದಲ್ಲಿ ಸೈಕ್ಲೋಥಾನ್, ಆ 9ರಂದು ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ದಿನದ ಮಹತ್ವ ಕುರಿತು ಶಾಲಾ ಮಕ್ಕಳಿಗೆ ರಸಪ್ರಶ್ನೆ, ಆ 10ರಂದು ಶಾಲೆಗಳಲ್ಲಿ ಡ್ರಾಯಿಂಗ್, ಪೇಂಟಿಂಗ್ ಹಾಗೂ ಆ 11ರಿಂದ 13ರವರೆಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಾಟಕೋತ್ಸವ ಮತ್ತು ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆಗೆ ನಿರ್ಧರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.

‘ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲೆಂದೇ ಸಾರ್ವಜನಿಕರಿಗೆ ವಿತರಣೆ ಮಾಡಲು ಜಿಲ್ಲೆಗೆ ರಾಜ್ಯ ಸರ್ಕಾರದಿಂದ 76 ಸಾವಿರ ರಾಷ್ಟ್ರಧ್ವಜಗಳು ಪೂರೈಕೆಯಾಗಿದ್ದು, ಇದನ್ನು ತಾಲ್ಲೂಕುಗಳಿಗೆ ನೀಡಲಾಗುವುದು. ಇದಲ್ಲದೆ ಕಲಬುರಗಿ ಮಹಾನಗರ ಪಾಲಿಕೆ 10 ಸಾವಿರ ರಾಷ್ಟ್ರಧ್ವಜಗಳನ್ನು ನಗರದ ನಿವಾಸಿಗಳಿಗೆ ವಿತರಿಸಲಿದ್ದು, ಜಿಲ್ಲಾ ಪಂಚಾಯತಿಯು ಪ್ರತಿ ಗ್ರಾಮ ಪಂಚಾಯಿತಿಗೆ 300ರಿಂದ 500ರವರೆಗೆ ಒಟ್ಟಾರೆ 1.20 ಲಕ್ಷ ಧ್ವಜಗಳನ್ನು ಪೂರೈಸಲಿದೆ. ಪ್ರತಿ ಧ್ವಜವನ್ನು ₹ 22ಕ್ಕೆ ನೀಡಲಾಗುತ್ತದೆ. ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಮೆರೆಯಬೇಕು’ ಎಂದು ಯಶವಂತ ವಿ. ಗುರುಕರ್ ಮನವಿ ಮಾಡಿದರು.

ADVERTISEMENT

ಲಸಿಕೆ ಶಿಬಿರ ಆಯೋಜಿಸಿ: ಜಿಲ್ಲೆಯಲ್ಲಿ 15ರಿಂದ 17 ವಯಸ್ಸಿನ 27 ಸಾವಿರ ಜನರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಅಭಿಯಾನದ ಅಂಗವಾಗಿ ಲಸಿಕೆ ಕ್ಯಾಂಪ್ ಆಯೋಜಿಸಿ ಸಂಪೂರ್ಣವಾಗಿ ಲಸಿಕಾಕರಣ ಮುಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಅವರಿಗೆ ಯಶವಂತ ವಿ. ಗುರುಕರ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಉಪವಿಭಾಗಾಧಿಕಾರಿ ಮೋನಾ ರೋತ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.