ಅಫಜಲಪುರ: ಮಳೆ ರಭಸಕ್ಕೆ ತಾಲ್ಲೂಕಿನ ಬಿದನೂರ ಕೆರೆ ಒಡೆದು ಬೆಳೆಗಳಿಗೆ ಹಾನಿಯಾಗಿದೆ. ನೂರಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಅಪಾರ ಪ್ರಮಾಣದ ಕಬ್ಬು, ತೊಗರಿ, ಹತ್ತಿ ಮತ್ತು ತೋಟದ ಬೆಳೆಗಳಿಗೂ ಹಾನಿಯಾಗಿದೆ.
ಬಿದನೂರ ಮತ್ತು ಗೊಬ್ಬುರ ಗ್ರಾಮಗಳ ಮಧ್ಯೆ ದೊಡ್ಡ ಕೆರೆ ಒಡೆದಿದ್ದರಿಂದ ನೀರು ಹೊಲಗಳಿಗೆ ನುಗ್ಗಿದೆ. ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೊಡಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್ಐ ವೀರಭದ್ರಪ್ಪ ಸಜ್ಜನ ಗುರುವಾರ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.
100 ಮನೆಗಳಿಗೆ ಹಾನಿ: ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಅಳ್ಳಗಿ(ಕೆ), ಹವಳಗಾ, ಕೊಳ್ಳೂರ, ಹಿಂಚಗೇರಾ, ಅಫಜಲಪುರ ಪಟ್ಟಣದ, ದುದ್ದುಣಗಿ, ರೇವೂರ(ಕೆ), ರೇವೂರ(ಬಿ), ಮಾಶಾಳ, ಸೊನ್ನ, ಮಣೂರ, ಶಿವೂರ, ಬೋಸಗಾ, ನಂದರಗಾ, ತೆಲ್ಲುಣಗಿ, ಜೇವರ್ಗಿ ಗ್ರಾಮಗಳಲ್ಲಿ ಸುಮಾರು 100 ಮನೆಗಳು ಹಾನಿಯಾಗಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30 ಸಾವಿರ ಎಕರೆ ಕಬ್ಬು ನಾಶವಾಗಿದೆ. ವಿಶೇಷವಾಗಿ ಭೀಮಾನದಿ ದಡದ ಗ್ರಾಮಗಳಲ್ಲಿ ಹೆಚ್ಚಿನ ಕಬ್ಬು ನೆಲಕ್ಕುರಳಿದೆ. ಮಣೂರ, ಹೊಸೂರ, ಭಾಸಗಿ, ಶೇಷಗಿರಿ, ಹಿಂಚಗೇರಾ, ಕಲ್ಲೂರ, ಘತ್ತರಗಾ, ಕೊಳ್ಳೂರ, ಬಂದರವಾಡ, ಕೆಕ್ಕರಸಾವಳಗಿ, ಕಿರಸಾವಳಗಿ, ಟಾಕಳಿ, ಹಸರಗುಂಡಗಿ, ಬಳೂರ್ಗಿ, ಮಾಶಾಳ ಗ್ರಾಮಗಳಲ್ಲಿ ಕಬ್ಬು ಹಾನಿಯಾಗಿದೆ ಎಂದು ಕೃಷಿ ಇಲಾಖೆಯವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.