ADVERTISEMENT

ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೆರೆ ಸಿಕ್ಕಿದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 4:08 IST
Last Updated 29 ಏಪ್ರಿಲ್ 2022, 4:08 IST
ದಿವ್ಯಾ ಹಾಗರಗಿ ಹಾಗೂ ತಂಡ ಸೆರೆ ಸಿಕ್ಕಿದ್ದು ಹೇಗೆ?
ದಿವ್ಯಾ ಹಾಗರಗಿ ಹಾಗೂ ತಂಡ ಸೆರೆ ಸಿಕ್ಕಿದ್ದು ಹೇಗೆ?   

ಕಲಬುರಗಿ: ಪಿಎಸ್ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಪ್ರಮುಖ ಆರೋಪಿ, ಇಲ್ಲಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಹಾಗೂ ತಂಡ ಸೆರೆ ಸಿಕ್ಕಿದ್ದು ಹೇಗೆ?

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶಹಾಬಾದ್ ‌ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ ಎಂಬುವವರನ್ನು ಗುರುವಾರ ವಶಕ್ಕೆ ಪಡೆದಿದ್ದರು. ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ‌ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದ ಸೇಡಂನ ಶಾಂತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪ‌ ಇವರ ಮೇಲಿತ್ತು.

ಜ್ಯೋತಿ ಪಾಟೀಲ ಅವರ ಮೊಬೈಲ್‌ಗೆ ಬಂದ ಹಾಗೂ ಅವರ ಮೊಬೈಲ್‌ನಿಂದ ಹೊರಹೋದ ಕರೆಗಳನ್ನು ಸಿಐಡಿ ತಂಡ ಜಾಲಾಡಿದಾಗ, ಆರೋಪಿಗಳಲ್ಲಿ ಒಬ್ಬರು ಜ್ಯೋತಿ ಪಾಟೀಲ ಅವರ ಜೊತೆ ಸಂಪರ್ಕದಲ್ಲಿ ಇರುವುದು ಗೊತ್ತಾಯಿತು. ಆ ಮೊಬೈಲ್‌ ಲೋಕೇಷನ್‌ ಪತ್ತೆ ಹಚ್ಚಿದ ತನಿಖಾಧಿಕಾರಿಗಳು, ಮಹಾರಾಷ್ಟ್ರದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಶುಕ್ರವಾರ ನಸುಕಿನಲ್ಲಿ ಪುಣೆಯಲ್ಲಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರೋಪಿಗಳಲ್ಲಿ ಬಹುತೇಕರು ಈ ಅವಧಿಯಲ್ಲಿ ಮೊಬೈಲ್‌ ಬಳಸುತ್ತಿರಲಿಲ್ಲ. ಜ್ಯೋತಿ ಪಾಟೀಲ ಜೊತೆ ಸಂಪರ್ಕದಲ್ಲಿರುವ ಒಬ್ಬರು ಪದೇ ಪದೇ ಸಿಮ್‌ ಬದಲಿಸುತ್ತಿದ್ದರು. ಹೀಗಾಗಿ ಅವರ ಪತ್ತೆ ಕಷ್ಟಕರವಾಗಿತ್ತು ಎಂಬುದು ಸಿಐಡಿ ಮೂಲಗಳ ಮಾಹಿತಿ.

ಕಾಶ್ಮೀರಕ್ಕೂ ತೆರಳಿದ್ದ ತಂಡ: ದಿವ್ಯಾ ಹಾಗರಗಿ ಹಾಗೂ ಇತರರ ಬಂಧನಕ್ಕಾಗಿ ನ್ಯಾಯಾಲಯದಿಂದ ಬಂಧನ ವಾರೆಂಟ್‌ ಪಡೆದಿದ್ದ ಸಿಐಡಿ, ಅವರ ಪತ್ತೆಗಾಗಿ ಕಾಶ್ಮೀರಕ್ಕೂ ಒಂದು ತಂಡವನ್ನು ಕಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.