ಸೇಡಂ: ಪ್ರಸಕ್ತ ವರ್ಷ ಮುಂಗಾರು ಮಳೆ ಅಧಿಕವಾಗಿದ್ದರಿಂದ ತಾಲ್ಲೂಕಿನಲ್ಲಿ ಸೀತಾಫಲ ಹಣ್ಣಿನ ಗಿಡಕ್ಕೆ ಅಧಿಕ ಫಲ ಬಂದಿದೆ. ಹೀಗಾಗಿ ಮಾರುಕಟ್ಟೆಗೆ ಸೀತಾಫಲ ಹಣ್ಣು ಲಗ್ಗೆ ಇಟ್ಟಿದ್ದು ವ್ಯಾಪಾರ ಜೋರಾಗಿ ನಡೆಯುತ್ತಿದೆ.
‘ಕಡಿಮೆ ಮಳೆಯಾದರೆ ಸೀತಾಫಲ ಗಿಡ ಹೆಚ್ಚಿನ ಕಾಯಿ ಕಟ್ಟುತ್ತಿರಲಿಲ್ಲ. ಗಿಡಕ್ಕೆ 5-8 ಕಾಯಿ ಮಾತ್ರ ಕಾಣುತ್ತಿದ್ದವು. ಆದರೆ ಈ ವರ್ಷ ಅಧಿಕ ಮಳೆ ಸುರಿದ ಪರಿಣಾಮ ಗಿಡಕ್ಕೆ 10-16 ಕಾಯಿ ಕಟ್ಟಿವೆ. ಕಾಯಿಗಳು ದೊಡ್ಡದಾಗಿ ಹಾಗೂ ಫಲವತ್ತಾಗಿವೆ. ಹೀಗಾಗಿ ಹಣ್ಣಾದಾಗ ಹೆಚ್ಚು ಸಿಹಿ, ರುಚಿಕರವಾಗಿರುತ್ತವೆ’ ಎನ್ನುತ್ತಾರೆ ತಾಂಡಾ ನಿವಾಸಿಗಳು.
ತಾಲ್ಲೂಕಿನ ಕಡತಾಲ, ಕಡತಾಲ ತಾಂಡಾ, ಕೊತ್ತಪಲ್ಲಿ, ಕದಲಾಪುರ, ಕದಲಾಪುರ ತಾಂಡಾ, ಮೇದಕ, ಮೇದಕ ತಾಂಡಾ ಹಾಗೂ ಮುಧೋಳ, ನಾಡೆಪಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಸರ್ಕಾರಿ ಭೂಮಿ ಹೆಚ್ಚಿದೆ. ಈ ಭೂಮಿ ಮತ್ತು ಅರಣ್ಯ ಪ್ರದೇಶದಲ್ಲಿ ಸೀತಾಫಲ ಗೀಡಗಳು ಹೆಚ್ಚಿದ್ದು, ತಾಂಡಾ ನಿವಾಸಿಗಳು ಸೀತಾಫಲ ಹಣ್ಣು ಕಡಿದು ಹಣ್ಣು ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
‘ಕೆಲಸಕ್ಕೆಂದು ಹೈದರಾಬಾದ್, ತೆಲಂಗಾಣ, ಮುಂಬೈ ಕಡೆ ತೆರಳಿದ್ದ ತಾಂಡಾ ನಿವಾಸಿಗಳು ಈ ವರ್ಷ ಸೀತಾಫಲ ಹಣ್ಣಿನ ಸೀಜನ್ ಬರುತ್ತಿದ್ದಂತೆಯೇ ತಾಂಡಾಕ್ಕೆ ವಾಪಸ್ಸಾಗಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡು ತಿಂಗಳು ಸೀತಾಫಲ ಹಣ್ಣಿನ ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಹೊಲ-ಗದ್ದೆಗಳಲ್ಲಿ, ಅರಣ್ಯ ಪ್ರದೇಶಕ್ಕೆ ತೆರಳಿ ಗಂಡು ಮಕ್ಕಳು ಕಾಯಿ ಕಡಿದು ಮನೆಯಲ್ಲಿ ಎರಡ್ಮೂರು ದಿನ ಹಣ್ಣು ಮಾಡುತ್ತಾರೆ. ಅವುಗಳನ್ನು ಬುಟ್ಟಿಯಲ್ಲಿ ತಾಂಡಾ ಮಹಿಳೆಯರು ಮಾರುಕಟ್ಟೆಗೆ ತೆರಳಿ ಮಾರಾಟ ಮಾಡುತ್ತಾರೆ. ಗಂಡು-ಹೆಣ್ಣು ಪರಿಶ್ರಮ ಪಟ್ಟು ತಮ್ಮ ದಿನದ ಕೂಲಿಯಲ್ಲಿ ನಿರತರಾಗಿದ್ದಾರೆ’ ಎನ್ನುತ್ತಾರೆ ಮುಖಂಡ ರವಿ ರಾಠೋಡ.
‘ಬೆಳಿಗ್ಗೆ 5-6 ಗಂಟೆಗೆ ತಾಂಡಾದಿಂದ ಸೀತಾಫಲ ಹಣ್ಣಿನ ಬುಟ್ಟಿ ತುಂಬಿಕೊಂಡು ಖಾಸಗಿ ವಾಹನದಲ್ಲಿ ಸೇಡಂ ಪಟ್ಟಣಕ್ಕೆ ಆಗಮಿಸುತ್ತೇವೆ. ಪ್ರತಿಯೊಬ್ಬರು ಎರಡರಿಂದ ಮೂರು ಬುಟ್ಟಿ ತರುತ್ತಾರೆ. ಎಲ್ಲರೂ ಬುಟ್ಟಿ ಖಾಲಿಯಾದ ನಂತರ ತಾಂಡಾಕ್ಕೆ ಮರಳುತ್ತೇವೆ. ಒಂದು ಬುಟ್ಟಿ ₹400-600 ವರೆಗೆ ಬೆಲೆ ಇರುತ್ತದೆ. ನಿತ್ಯವು 2-3 ಬುಟ್ಟಿ ಮಾರಾಟ ಮಾಡಲಾಗುತ್ತದೆ. ಪ್ರತಿ ಹಣ್ಣಿನ ಬೆಲೆ ₹5–25 ವರೆಗೆ ಸೀತಾಫಲ ಮಾರಾಟವಾಗುತ್ತಿವೆ. ಈ ವರ್ಷ ಸೀತಾಫಲ ಹಣ್ಣು ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ತಾಂಡಾ ನಿವಾಸಿ ಲಕ್ಷ್ಮಿಬಾಯಿ.
ತಾಂಡಾದಲ್ಲಿನ ಕೆಲವರು ತಮ್ಮ ಜೀವನಕ್ಕಾಗಿ ದಿನವಿಡಿ ಹೊಲಗದ್ದೆ ಅರಣ್ಯ ಪ್ರದೇಶದಲ್ಲಿ ಸೀತಾಫಲ ಹಣ್ಣು ಮಾರಾಟ ಮಾಡುತ್ತಿದ್ದಾರೆ.ರವಿ ರಾಠೋಡ ಮುಖಂಡ
ಈ ವರ್ಷ ಮಾರುಕಟ್ಟೆಯಲ್ಲಿ ಸೀತಾಫಲ ಹಣ್ಣಿನ ವ್ಯಾಪಾರ ಹೆಚ್ಚಿದ್ದು ಸರ್ಕಾರಿ ಹಾಗೂ ವಿವಿಧ ಕಂಪೆನಿಗಳ ನೌಕರರು ಸೀತಾಫಲ ಹಣ್ಣು ಖರೀದಿ ಮಾಡುತ್ತಿದ್ದಾರೆ.ಸುಮಿತ್ರ ತಾಂಡಾ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.