ಕಲಬುರಗಿ ಜಿಲ್ಲೆಯ ಜೇರಟಗಿಯಲ್ಲಿ ಹಲ್ಲೆಗೆ ಒಳಗಾದ ಜೋಗತಿ ಸೀತಮ್ಮ ಹುಲಿಗೆಪ್ಪ
ಜೇವರ್ಗಿ (ಕಲಬುರಗಿ ಜಿಲ್ಲೆ): ‘ಮಕ್ಕಳ ಕಳ್ಳಿ’ ಎಂದು ಶಂಕಿಸಿ ಜೋಗತಿಯೊಬ್ಬರ ಮೇಲೆ ಪೋಷಕರು ಹಾಗೂ ಗ್ರಾಮಸ್ಥರು ಮನಬಂದಂತೆ ಥಳಿಸಿದ ಘಟನೆ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ತಾಲ್ಲೂಕಿನ ತಾವರಗೇರಾ ಗ್ರಾಮದ ಸೀತಮ್ಮ ಹುಲಿಗೆಪ್ಪ ( 38 ವರ್ಷ) ಹಲ್ಲೆಗೊಳಗಾದವರು. ಘಟನೆಯಲ್ಲಿ ಈ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಲ್ಲೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಿಷಯ ತಿಳಿದ ನೆಲೋಗಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.
‘ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ನಿತ್ಯ ಸಹಸ್ರರಾರು ಭಕ್ತರು ಸೇರಿದಂತೆ ಜೋಗತಿಯರು ಭೇಟಿ ನೀಡುತ್ತಾರೆ. ಅದರಂತೆ ಕೊಪ್ಪಳದಿಂದ ಬಂದ ಜೋಗತಿ ಸೀತಮ್ಮ ಕೂಡ ಭಾಗ್ಯವಂತಿ ದೇವಿ ದರ್ಶನ ಪಡೆದು ಮರಳಿ ಸ್ವಗ್ರಾಮ ತಾವರಗೇರಾಕ್ಕೆ ತೆರಳಲು ಜೇರಟಗಿ ಗ್ರಾಮಕ್ಕೆ ಬಂದಿದ್ದರು. ‘ದೇವಿ ಭಂಡಾರ ಹಚ್ಚಿ ಆಶೀರ್ವಾದ ಮಾಡುತ್ತೇನೆ’ ಎಂದು ಸೀತಮ್ಮ ಮಕ್ಕಳನ್ನು ಕರೆದು ಮಾತನಾಡಿಸುವ ವೇಳೆ ಕೆಲವರು ಮಕ್ಕಳ ಕಳ್ಳಿ ಎಂದು ಶಂಕಿಸಿ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಪೂರ್ವಾಪರ ವಿಚಾರಿಸಿದಾಗ ಗ್ರಾಮಸ್ಥರ ತಪ್ಪು ಕಲ್ಪನೆಯಿಂದ ಈ ಘಟನೆ ಜರುಗಿದ್ದು ಗೊತ್ತಾಗಿದೆ’ ನೆಲೋಗಿ ಠಾಣೆ ಪಿಎಸ್ಐ ಚಿದಾನಂದ ಸೌದಿ ತಿಳಿಸಿದ್ದಾರೆ.
‘ಹಲ್ಲೆ ಮಾಡಿದವರ ಮೇಲೆ ದೂರು ನೀಡಲು ಮಹಿಳೆ ನಿರಾಕರಿಸಿ, ತಪ್ಪಾಗಿ ತಿಳಿದು ಹೊಡೆದಿದ್ದಾರೆ ಹೋಗಲಿ ಬಿಡಿ’ ಎಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.