ಜೇವರ್ಗಿ: ಭೀಮಾ ನದಿಯ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ತಾಲ್ಲೂಕಿನ ಹೊನ್ನಾಳ ಗ್ರಾಮದ ರೈತರೊಬ್ಬರ ಮೆಕ್ಕೆಜೋಳ ಫಸಲು ಹಾಳಾಗಿದೆ. ಗುಡ್ಡೆ ಹಾಕಿದಲ್ಲೇ ಮೆಕ್ಕೆಜೋಳದ ತೆನೆಗಳು ಮೊಳಕೆ ಒಡೆದಿದ್ದು, ರೈತ ಸಕ್ರೆಪ್ಪ ನಾಟೀಕಾರ ಕಂಗಾಲಾಗಿದ್ದಾರೆ.
ಸಕ್ರೆಪ್ಪ ನಾಟೀಕಾರ ಅವರು ತಮ್ಮ 11 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಉತ್ತಮ ಫಸಲು ಬಂದಿತ್ತು. ಮೆಕ್ಕೆಜೋಳ ಕಟಾವು ಮಾಡಿ ರಾಶಿ ಮಾಡಲು ಗುಡ್ಡೆ ಹಾಕಿದ್ದರು. ಆದರೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಹಾಗೂ ಪ್ರವಾಹದಿಂದ ಗುಡ್ಡೆ ಹಾಕಿದಲ್ಲೇ ಮೊಳಕೆ ಒಡೆದು ಹಾಳಾಗಿದೆ.
ಬೀಜ, ಗೊಬ್ಬರ ಸೇರಿದಂತೆ ಸುಮಾರು ₹3 ಲಕ್ಷ ಖರ್ಚು ಮಾಡಿ ಬಿತ್ತನೆ ಮಾಡಲಾಗಿತ್ತು. ಎಡೆಬಿಡದೇ ಸುರಿದ ಮಳೆಗೆ ಫಸಲು ಸಾಗಿಸಲು ಸಾಧ್ಯವಾಗಲಿಲ್ಲ. ಸಾಗಿಸಲು ಹೊಲಕ್ಕೆ ತೆಗೆದುಕೊಂಡು ಹೋದ ಟ್ರ್ಯಾಕ್ಟರ್ ಕೂಡ ಸಿಲುಕಿಕೊಂಡು ಬಹಳಷ್ಟು ಕಷ್ಟ ಅನುಭವಿಸಬೇಕಾಯಿತು. ಇದೇ ವೇಳೆ 5 ಲಕ್ಷ ಕ್ಯೂಸೆಕ್ ನೀರು ಭೀಮಾನದಿಗೆ ಬಿಟ್ಟ ಪರಿಣಾಮ ಹೊಲ ಸಂಪೂರ್ಣ ಜಲಾವೃತಗೊಂಡು ಹಾಳಾಗಿ ಹೋಗಿದೆ.
ಐದಾರು ಲಕ್ಷ ರೂ. ಮೌಲ್ಯದ ಮೆಕ್ಕೆಜೋಳದ ಫಸಲು ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರದ ಪರಿಹಾರಕ್ಕಾಗಿ ರೈತ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
‘ಭೀಮಾನದಿಯ ಪ್ರವಾಹ ಹಾಗೂ ಅತಿಯಾದ ಮಳೆಯಿಂದ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೇನು ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಅನ್ನುವಷ್ಟರಲ್ಲಿ ಪ್ರವಾಹದ ನೀರು ಮೆಕ್ಕೆಜೋಳದ ಜತೆಗೆ ನಮ್ಮ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಸರ್ಕಾರ ನಮ್ಮ ನೆರವಿಗೆ ಬಂದು ಪರಿಹಾರ ಕೊಡಬೇಕು’ ಎಂದು ಸಕ್ರೆಪ್ಪ ನಾಟೀಕಾರ ಮನವಿ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.