
ಕಲಬುರಗಿ: ಕೆಲವರು ದೇಶಭಕ್ತಿ ಗೀತೆ ಹಾಡಿದರು. ಮತ್ತೆ ಕೆಲವರು ಸುಗಮ ಸಂಗೀತ ಗಾನಸುಧೆ ಹರಿಸಿದರು. ಇನ್ನಷ್ಟು ಮಂದಿ ಏಕಾಂಕ ನಾಟಕದಲ್ಲಿ ಮನೋಜ್ಞ ತೋರಿ ಚಪ್ಪಾಳೆ ಗಿಟ್ಟಿಸಿದರು. ಕೆಲವರು ವ್ಯಂಗ್ಯ ಚಿತ್ರ ರಚನೆಯಲ್ಲಿ ಕೈಚಳಕ ತೋರಿದರು... ನಗರದ ಆಳಂದ ಚೆಕ್ಪೋಸ್ಟ್ ಸಮೀಪದ ಕಲಬುರಗಿ ಕೃಷಿ ಕಾಲೇಜು ಆವರಣದಲ್ಲಿ ಶುಕ್ರವಾರ ಆರಂಭವಾದ 16ನೇ ಅಂತರ ಕಾಲೇಜುಗಳ ಯುವಜನೋತ್ಸವ ‘ಕಲಾ ಸಂಗಮ’ದಲ್ಲಿ ಕಂಡ ದೃಶ್ಯಗಳಿವು.
ಇದಕ್ಕೂ ಮುನ್ನ ಕಾಲೇಜಿನ ಆಟದ ಮೈದಾನದಿಂದ ಆರಂಭವಾದ ಸಾಂಸ್ಕೃತಿಕ ಮೆರವಣಿಗೆಗೆ ಡೊಳ್ಳಿನ ಕಲಾವಿದರು, ಎನ್ಸಿಸಿ ಕೆಡೆಟ್ಗಳು, ಪೂರ್ಣಕುಂಭ ಹೊತ್ತ ವಿದ್ಯಾರ್ಥಿಗಳು ಹಾಗೂ ಬಣ್ಣಬಣ್ಣದ ಛತ್ರಿ ಹಿಡಿದ ವಿದ್ಯಾರ್ಥಿಗಳು ರಂಗು ತಂದರು. ರಾಯಚೂರು ಕೃಷಿ ವಿವಿ ವ್ಯಾಪ್ತಿಯ ಏಳು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ‘ಸಾಲುಮರದ ತಿಮ್ಮಕ್ಕ’ಕ್ಕೆ ಚಿತ್ರ ಹಿಡಿದು ‘ಹಸಿರೇ ಉಸಿರು’ ಘೋಷಣೆ ಮೊಳಗಿಸಿ ಗಮನ ಸೆಳೆದರು. ವಿದ್ಯಾರ್ಥಿಗಳಾದ ವಿಶ್ವರಾಧ್ಯ ‘ಬಸವಣ್ಣ’ನಾಗಿ, ನಿಸರ್ಗಾ ‘ಅಕ್ಕಮಹಾದೇವಿ’ಯಾಗಿ, ಚೇತನ್ ‘ಅಲ್ಲಮಪ್ರಭು’ವಾಗಿ ವೇಷದಲ್ಲಿ ಕಂಗೊಳಿಸಿದರು.
ಗಣ್ಯರು ದೀಪ ಬೆಳಗಿ, ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಲಾವಿದ ವೈಜನಾಥ ಬಿರಾದಾರ ಸರಣಿ ಡೈಲಾಗ್ ಹೇಳಿ ಹಾಸ್ಯ ಉಕ್ಕಿಸಿದರು. ಬಳಿಕ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಹೆಜ್ಜೆ ಹಾಕಿ ‘ಕಲಾ ಸಂಗಮ’ದ ಮೆರುಗು ಹೆಚ್ಚಿಸಿದರು.
ನಾಟಕ ಅಕಾಡೆಮಿ ಮಾಜಿ ಸದಸ್ಯ ಸಂದೀಪ ಬಿ.ಮಾಳಗಿ ಮಾತನಾಡಿ, ‘ದೇಶ ಸ್ವತಂತ್ರವಾದಾಗ ದೇಶದ ಜನಸಂಖ್ಯೆ 33–34 ಕೋಟಿಗಳಷ್ಟಿತ್ತು. ಆದರೂ ಅನ್ನದ ಕೊರತೆ ಕಾಡುತ್ತಿತ್ತು. ಇಂದು ದೇಶದ ಜನಸಂಖ್ಯೆ 140 ಕೋಟಿಗಳಷ್ಟಿದ್ದರೂ, ಅನ್ನದ ಕೊರತೆ ಇಲ್ಲ. ಈ ಪರಿಯ ಅನ್ನದ ಉತ್ಪಾದನೆಯಲ್ಲಿ ದೇಶದ ಎಲ್ಲ ಕೃಷಿ ಕಾಲೇಜುಗಳು, ವಿಜ್ಞಾನಿಗಳು, ಸಂಶೋಧಕರ ಶ್ರಮವಿದೆ’ ಎಂದರು.
ರಾಯಚೂರು ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಡಿ., ಮಲ್ಲೇಶ ಕೊಲಿಮಿ ಮಾತನಾಡಿದರು. ರಾಯಚೂರು ಕೃಷಿ ವಿವಿ ಆಡಳಿತಾಧಿಕಾರಿ ಜಾಗೃತಿ ಬಿ.ದೇಶಮಾನ್ಯ, ಎ.ಜಿ.ಶ್ರೀನಿವಾಸ, ಮಚ್ಚೇಂದ್ರನಾಥ್ ಎಸ್., ಗುರುರಾಜ ಸುಂಕದ, ಎನ್ಎಸ್ಎಸ್ ಅಧಿಕಾರಿ ರಾಜಶೇಖರ ಬಸನಾಯಕ ಸೇರಿದಂತೆ ಹಲವರಿದ್ದರು.
ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕು. ಆ ನಿಟ್ಟಿನಲ್ಲಿ ‘ಕಲಾ ಸಂಗಮ’ ವಿದ್ಯಾರ್ಥಿಗಳಿಗೆ ತಮ್ಮಲಿರುವ ಪ್ರತಿಭೆ ಪ್ರಚುರಪಡಿಸಲು ಇರುವ ಸುವರ್ಣ ಅವಕಾಶಪ್ರೊ.ಎಂ.ಹನುಮಂತಪ್ಪ ಕುಲಪತಿ ರಾಯಚೂರು ಕೃಷಿ ವಿ.ವಿ.
ಯುವ ಜನೋತ್ಸವದಲ್ಲಿ ಏಳು ಕೃಷಿ ಕಾಲೇಜುಗಳ ತಲಾ 22 ವಿದ್ಯಾರ್ಥಿಗಳು ಹಾಗೂ 35 ಅಧಿಕಾರಿ–ಸಿಬ್ಬಂದಿ ಸೇರಿದಂತೆ ಒಟ್ಟು 189 ಮಂದಿ ಪಾಲ್ಗೊಂಡಿದ್ದಾರೆಶಿವಶರಣಪ್ಪ ಬಿ ಗೌಡಪ್ಪ ಕಲಬುರಗಿ ಕೃಷಿ ಕಾಲೇಜು ಡೀನ್
ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕು. ಆ ನಿಟ್ಟಿನಲ್ಲಿ ‘ಕಲಾ ಸಂಗಮ’ ವಿದ್ಯಾರ್ಥಿಗಳಿಗೆ ತಮ್ಮಲಿರುವ ಪ್ರತಿಭೆ ಪ್ರಚುರಪಡಿಸಲು ಇರುವ ಸುವರ್ಣ ಅವಕಾಶಪ್ರೊ.ಎಂ.ಹನುಮಂತಪ್ಪ ಕುಲಪತಿ ರಾಯಚೂರು ಕೃಷಿ ವಿ.ವಿ.
‘ಕೃಷಿಯು ನಮ್ಮೆಲ್ಲರ ಮೂಲ ಕಸುಬು. ಸಾಂಸ್ಕೃತಿಕ ಕಲೆಗಳಂತೆ ಕೃಷಿಯೂ ಕಲೆಯೇ ಆಗಿದೆ. ಕೃಷಿ ಕ್ಷೇತ್ರವೇ ಆಗಿರಲಿ ಕಲಾ ಕ್ಷೇತ್ರವೇ ಆಗಿರಲಿ ನಾವು ಶ್ರದ್ಧೆಯಿಂದ ದುಡಿದರೆ ಯಶಸ್ಸು ಶತಸಿದ್ಧ’ ಎಂದು ಖ್ಯಾತ ಚಲನಚಿತ್ರ ಕಲಾವಿದ ವೈಜನಾಥ ಬಿರಾದಾರ ಅಭಿಪ್ರಾಯಪಟ್ಟರು. ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ನಾನು ಓದಿದ್ದು ಬರೀ ಮೂರನೇ ತರಗತಿ. ಆದರೆ ಸಾವಿರಾರು ನಾಟಕ ಸಾವಿರಾರು ರಸಮಂಜರಿ ಕಾರ್ಯಕ್ರಮ ನೂರಾರು ಸಿನಿಮಾ– ಧಾರಾವಾಹಿಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು. ಹತ್ತಾರು ಪ್ರಶಸ್ತಿ ಪುರಸ್ಕಾರಗಳೂ ಸಂದಿವೆ. ಇದಕ್ಕೆ ಶ್ರದ್ಧೆ ಹಾಗೂ ಪ್ರಯತ್ನದ ಫಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.