ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಮರಮಂಚಿ ಗ್ರಾಮದಲ್ಲಿ ಸೋಮವಾರ, ಸೋಂಕಿತರನ್ನು ಕರೆ ತರಲು ಹೋಗಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಕೆಲವು ಗ್ರಾಮಸ್ಥರು, ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ.
ಮರಮಂಚಿ ತಾಂಡಾದಲ್ಲಿ 15 ಜನರಿಗೆ ಕೋವಿಡ್ ಸೊಂಕು ಪತ್ತೆಯಾಗಿದೆ. ಇವರೆಲ್ಲರೂ ಮುಂಬೈನಿಂದ ಮರಳಿದವರು. ಸೊಂಕು ಪತ್ತೆಯಾದ ಹಿನ್ನಲೆ ಅವರನ್ನ ಆಸ್ಪತ್ರೆಗೆ ದಾಖಲಿಸಲು ತಾಂಡಾಕ್ಕೆ ಅಧಿಕಾರಗಳು ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರುಆಂಬುಲೆನ್ಸ್ ಜೊತೆಗೆ ತೆರಳಿದ್ದರು.
'ನಮ್ಮಲ್ಲಿ ಯಾರಿಗೂ ಕೋವಿಡ್ ಬಂದಿಲ್ಲ. ಲಕ್ಷಣಗಳೇ ಇಲ್ಲ. ಎಲ್ಲರೂ ಹುಷಾರಾಗಿದ್ದಾರೆ. ಸುಮ್ಮನೆ ಕರೆದೊಯ್ಯಲು ಬಂದಿದ್ದೀರಿ' ಎಂದು ಸೋಂಕಿತರ ಸಂಬಂಧಿಕರು ಆಕ್ರೋಶಗೊಂಡರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕೋಪಗೊಂಡ ಜನ;
ಆಂಬುಲೆನ್ಸ್ ಸೇರಿದಂತೆ , ವೈದ್ಯರ ಮೇಲೆ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದರು.
ಕಲ್ಲು ತೂರಾಟದ ಹಿನ್ನಲ್ಲೆ ವಾಹನಗಳನ್ನ ಬಿಟ್ಟು ಅಧಿಕಾರಿಗಳು, ಸಿಬ್ಬಂದಿ ಓಡಿ ಹೋಗಿ ರಕ್ಷಣೆ ಪಡೆದರು.
ಇದರಿಂದಾಗಿ ಕೆಲಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಪೊಲೀಸರೇ ತಮ್ಮ ಮೇಲೆ ಹಲ್ಲೆ ನಡೇಸಿ ಗಾತಗೊಳಿಸಿದ್ದಾರೆ. ದಬ್ಬಾಳಿಕೆ ಮಾಡಿದ್ದಾರೆ ಎಂದು ಕೆಲ ತಾಂಡಾ ನಿವಾಸಿಗಳ ಆರೋಪಿಸಿದರು. ಬೆನ್ನು, ಕಾಲು, ತೊಡೆಗಳಿಗೆ ಲಾಠಿ ಏಟು ಬಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.
ಮಧ್ಯಾಹ್ನ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸಿಪಿಐ ರಾಘವೇಂದ್ರ ಭಜಂತ್ರಿ, ತಹಶೀಲ್ದಾರ್ ಅಂಜುಮ್ ತಬಸುಮ್ ತಾಂಡಾಗೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.