ADVERTISEMENT

ಕಲಬುರಗಿ | ಧಾರಾಕಾರ ಮಳೆಯಿಂದ ಅವಾಂತರ; ಪರಿಹಾರದತ್ತ ಜಿಲ್ಲೆಯ ಅನ್ನದಾತರ ಚಿತ್ತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:21 IST
Last Updated 5 ಸೆಪ್ಟೆಂಬರ್ 2025, 6:21 IST
   

ಕಲಬುರಗಿ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದ ನಿರಂತರ ಮಳೆಗೆ ಬರೋಬ್ಬರಿ 1.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಒಟ್ಟು ₹90 ಕೋಟಿಗೂ ಹೆಚ್ಚು ಹಾನಿ ಅಂದಾಜಿಸಲಾಗಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ವಾಡಿಕೆಯಂತೆ 156 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 263 ಮಿ.ಮೀ ಮಳೆ ಸುರಿದಿದ್ದು, ಶೇ 69ರಷ್ಟು ಹೆಚ್ಚು ಮಳೆಯಾಗಿತ್ತು. ಅದರಲ್ಲೂ ಕೊನೆಯ ಎರಡು ವಾರಗಳಲ್ಲಿ ಸುರಿದ 108 ಮಿ.ಮೀ ಮಳೆಯು ರೈತರ ಬೆಳೆಗಳನ್ನು ಆಪೋಶನ ಪಡೆದಿದೆ. ತೊಗರಿ, ಹೆಸರು, ಹತ್ತಿ, ಉದ್ದು ಬೆಳೆಗಳು ಅಪಾರ ಹಾನಿಗೀಡಾಗಿವೆ.

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 51,850 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಈ ಪೈಕಿ 25,471 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಬಿತ್ತನೆಯಾಗಿದ್ದ 30,935 ಹೆಕ್ಟೇರ್‌ಗಳ ಪೈಕಿ 7,976 ಹೆಕ್ಟೇರ್‌ ಪ್ರದೇಶದಲ್ಲಿನ ಉದ್ದು ಬೆಳೆ ಹಾಳಾಗಿದೆ.

ADVERTISEMENT

ಜಿಲ್ಲೆಯ ರೈತರು 5,94,191 ಹೆಕ್ಟೇರ್‌ನಲ್ಲಿ ಈ ಸಲ ತೊಗರಿ ಬಿತ್ತಿದ್ದರು. ಆ ಪೈಕಿ ಧಾರಾಕಾರ ಮಳೆಗೆ 58,319 ಹೆಕ್ಟೇರ್‌ನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ಹಾನಿಯಾಗಿದೆ.

1,22,058 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಪೈಕಿ 13,371 ಹೆಕ್ಟೇರ್‌ ಪ್ರದೇಶದ ಹತ್ತಿ ಬೆಳೆಯು ಹಾನಿಗೊಂಡಿದೆ. ಇದಲ್ಲದೇ, 715 ಹೆಕ್ಟೇರ್‌ನಷ್ಟು ಸೋಯಾಬಿನ್‌ ಬೆಳೆಯೂ ನಿರಂತರ ಮಳೆಗೆ ಸಿಲುಕಿ ನಲುಗಿದೆ.

ಜಿಲ್ಲೆಯ ಪೈಕಿ ಅತಿಹೆಚ್ಚು ಹಾನಿ ಆಳಂದ ತಾಲ್ಲೂಕಿನಲ್ಲಿ ಸಂಭವಿಸಿದ್ದು, 15,521 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ವಿವಿಧ ಬೆಳೆಗಳು ಮಳೆಗೆ ಆಹುತಿಯಾಗಿವೆ. ಅಫಜಲಪುರದಲ್ಲಿ 13,850 ಹೆಕ್ಟೇರ್‌ಗಳಷ್ಟು ಪ್ರದೇಶಗಳಲ್ಲಿ ಬೆಳೆ ಹಾಳಾಗಿದೆ.

ಹೆಸರು, ಉದ್ದು ರಾಶಿ ಪ್ರಗತಿಯಲ್ಲಿದೆ. ಸೋಯಾಬಿನ್‌ ಕಾಯಿಕಟ್ಟುವ ಹಂತದಲ್ಲಿದೆ. ತೊಗರಿ ಬೆಳವಣಿಗೆಯ ಹಂತದಲ್ಲಿದೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ 78 ಸಾವಿರ ದೂರು ಸ್ವೀಕರಿಸಲಾಗಿದ್ದು, 25 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಪ್ರಾದೇಶಿಕ ಪ್ರಾಕೃತಿಕ ವಿಕೋಪ ಹಾಗೂ ಕೋಯ್ಲೋತ್ತರ ಹಾನಿಯಡಿ ಪರಿಹಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.

115 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ: ಇದಲ್ಲದೇ ಜಿಲ್ಲೆಯಲ್ಲಿ ಜೂನ್‌ 1ರಿಂದ ಆಗಸ್ಟ್‌ 31ರ ಅವಧಿಯಲ್ಲಿ ಬರೋಬ್ಬರಿ 115.09 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಈ ಪೈಕಿ ಪಪ್ಪಾಯ ಹಾಗೂ ಈರುಳ್ಳಿ ಬೆಳೆಯೇ ಹೆಚ್ಚು.

ಕಲಬುರಗಿ ತಾಲ್ಲೂಕಿನಲ್ಲಿ 43 ಹೆಕ್ಟೇರ್‌ನಷ್ಟು ಹಾಗೂ ಅಫಜಲಪುರ ತಾಲ್ಲೂಕಿನಲ್ಲಿ 32.15 ಹೆಕ್ಟೇರ್‌ನಷ್ಟು ಸೇರಿ ಎರಡೇ ತಾಲ್ಲೂಕುಗಳಲ್ಲಿ 75.15ರಷ್ಟು ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. 11 ಹೆಕ್ಟೇರ್‌ಗಳಷ್ಟು ಟೊಮೆಟೊ ಹಾಗೂ 6.30 ಹೆಕ್ಟೇರ್‌ಗಳಷ್ಟು ಮೆಣಸಿನಕಾಯಿ ಬೆಳೆಗೂ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.