ಬೀದರ್: ಸರಕುಗಳನ್ನು ಪೂರೈಸದೇ 132 ಗುತ್ತಿಗೆದಾರರಿಗೆ ನಕಲಿ ಜಿಎಸ್ಟಿ ಬಿಲ್ ನೀಡಿ ₹9.25 ಕೋಟಿ ವಂಚಿಸಿದ್ದ ಆರೋಪದಡಿ ನಗರದ ರಾಹುಲ್ ಕುಲಕರ್ಣಿ ಎಂಬಾತನನ್ನು ಕಲಬುರಗಿ ಪೂರ್ವ ವಲಯದ ವಾಣಿಜ್ಯ ತೆರಿಗೆ (ಜಾರಿ) ಅಧಿಕಾರಿಗಳು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಇಲಾಖೆ ಜಂಟಿ ಆಯುಕ್ತೆ ಯಾಸ್ಮಿನ್ ಜಿ. ವಾಲೀಕಾರ, ‘ರಾಹುಲ್ 2020ರ ಅಕ್ಟೋಬರ್ರಲ್ಲಿ ಜಿಎಸ್ಟಿ ನೋಂದಣಿ ಮಾಡಿಕೊಂಡಿದ್ದ. ಆತನ ವಹಿವಾಟುಗಳ ಬಗ್ಗೆ ಸಂಶಯ ಬಂದಿದ್ದರಿಂದ ಜಿಎಸ್ಟಿ ನೋಂದಣಿ ರದ್ದು ಮಾಡಲಾಗಿತ್ತು. ಬಳಿ, ತಾಯಿ, ಸಹೋದರ, ಸ್ನೇಹಿತನ ಆಧಾರ್ ಕಾರ್ಡ್ ಆಧರಿಸಿ ಜಿಎಸ್ಟಿ ನೋಂದಣಿ ಮಾಡಿಸಿಕೊಂಡು ವಹಿವಾಟು ನಡೆಸುತ್ತಿದ್ದ’ ಎಂದರು.
‘ಬಿಲ್ಗಳ ಬಗ್ಗೆ ಶಂಕೆ ಬಂದು ತನಿಖೆ ನಡೆಸಿದಾಗ ರಾಹುಲ್ ಕುಲಕರ್ಣಿಯೇ ನಕಲಿ ಬಿಲ್ ನೀಡಿದ್ದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಈಗ ₹4 ಕೋಟಿ ತೆರಿಗೆಯನ್ನು ದಂಡ ಸಹಿತ ವಸೂಲಿ ಮಾಡಲಾಗಿದೆ’ ಎಂದರು.
‘ನಕಲಿ ಬಿಲ್ಗಳನ್ನು ನೀಡಿ ಶೇ 3ರಿಂದ ಶೇ 4ರಷ್ಟು ಕಮಿಷನ್ ಪಡೆಯುತ್ತಿದ್ದ’ ಎಂದು ತಿಳಿಸಿದ್ದಾರೆ. ರಾಹುಲ್ ಅವರ ತಾಯಿ, ಸಹೋದರ, ಸ್ನೇಹಿತನಿಗೂ ಸಮನ್ಸ್ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.