
ಕಲಬುರಗಿ: ‘ಸುಸ್ಥಿರತೆ ಎಂಬುದು ಬರೀ ಗುರಿಯಲ್ಲ. ದೀರ್ಘಾವಧಿ ಬದುಕಿಗೆ ಅದು ಅನಿವಾರ್ಯ’ ಎಂದು ಕೆಬಿಎನ್ ವಿವಿಯ ಸಮಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹ್ಮದ್ ಹೇಳಿದರು.
ನಗರದ ಕೆಬಿಎನ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬಿಬಿ ರಜಾ ಮಹಿಳಾ ಕಾಲೇಜು, ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯವು ಕರ್ನಾಟಕ ವಿಜ್ಞಾನ–ತಂತ್ರಜ್ಞಾನ ಅಕಾಡೆಮಿ, ಸರ್ಕಾರದ ವಿಜ್ಞಾನ–ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
‘ಜೈವಿಕ ವಿಜ್ಞಾನಗಳು ಸದ್ಯ ಅಡ್ಡದಾರಿಯಲ್ಲಿವೆ. ವೈದ್ಯಕೀಯ ವಿಜ್ಞಾನ, ಕೃಷಿ, ಆಹಾರ ಭದ್ರತೆ ಹಾಗೂ ಹವಾಮಾನ ಬದಲಾವಣೆ ಇತ್ಯಾದಿ ಕ್ಷೇತ್ರಗಳಲ್ಲಿ ಜೈವಿಕ ವಿಜ್ಞಾನವು ನಾವೀನ್ಯತೆ ಸಾಧಿಸುತ್ತಿದ್ದರೂ, ಸುಸ್ಥಿರ ಭವಿಷ್ಯದತ್ತ ಸಾಗಲು ಶೈಕ್ಷಣಿಕ, ಕೈಗಾರಿಕೆ ಮತ್ತು ನೀತಿ ನಿರೂಪಣೆ ವಿಷಯಗಳಲ್ಲಿ ಸಹಯೋಗದ ಅಗತ್ಯವಿದೆ’ ಎಂದರು.
‘ವಿಜ್ಞಾನದ ಮೂಲಕ ಮಾನವ ಮತ್ತು ಪರಿಸರ ಎರಡಕ್ಕೂ ಸೇವೆ ಒದಗಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಬೇಕಿದೆ. ವೈಜ್ಞಾನಿಕ ಸಮುದಾಯವು ಸುಸ್ಥಿರ ಅಭ್ಯಾಸಗಳ ಮೂಲಕ ಭೂಮಿ ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯು 2015ರಲ್ಲಿ ಹಾಕಿಕೊಂಡ 17 ಸುಸ್ಥಿರ ಗುರಿಗಳ ಅನುಷ್ಠಾನಕ್ಕೆ ಶ್ರಮಿಸಬೇಕಿದೆ’ ಎಂದರು.
ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್, ‘ಜೈವಿಕ ವಿಜ್ಞಾನಗಳು ನಮ್ಮ ಕಾಲದ ಸಂಕೀರ್ಣ ಸವಾಲುಗಳನ್ನು ಪರಿಹರಿಸುವಂಥ ಪ್ರಬಲ, ಹಾಗೂ ಪರಿಹಾರ ಆಧಾರಿತ ವಿಭಾಗವಾಗಿ ವಿಕಸನಗೊಂಡಿವೆ’ ಎಂದರು.
‘ತಳಿಶಾಸ್ತ್ರ, ಮಣ್ಣಿನ ಸೂಕ್ಷ್ಮ ಜೀವವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ರಿಮೋಟ್ ಸೆನ್ಸಾರ್ ವ್ಯವಸ್ಥೆಗಳ ಅಭಿವೃದ್ಧಿಯಿಂದಾಗಿ ಕೃಷಿ ಕ್ಷೇತ್ರದ ಉತ್ಪಾದಕತೆ ಹೆಚ್ಚಿಸಲು ನೆರವಾಗಿದೆ. ಅಂತೆಯೇ ವಿವಿಧ ಕ್ಷೇತ್ರಗಳಲ್ಲಿ ಜೈವಿಕ ವಿಜ್ಞಾನಗಳ ಪ್ರಗತಿಯು ಹಸಿರುಮನೆಗಳಂಥ ಆಧುನಿಕ ಕೃಷಿ ವ್ಯವಸ್ಥೆಗಳು ನಗರ ಪ್ರದೇಶಗಳಲ್ಲಿ ಸ್ಥಳಾಭಾವ, ನೀರಿನ ಮಿತಿ ಹಾಗೂ ಹವಾಮಾನದ ಮಿತಿಗಳನ್ನು ತಂತ್ರಜ್ಞಾನವು ಹೇಗೆ ಮೀರಿ ನಿಲ್ಲುತ್ತವೆ ಎಂಬುದನ್ನು ವಿವರಿಸುತ್ತದೆ’ ಎಂದರು.
ಸಮ್ಮೇಳನದ ಸಂಯೋಜಕಿ ಪ್ರೊ.ಕನೀಜ್ ಫಾತಿಮಾ ಮಾತನಾಡಿ, ‘ಎರಡು ದಿನಗಳ ಸಮ್ಮೇಳನದಲ್ಲಿ 6 ವಿದ್ವತ್ ಪೂರ್ಣ ಗೋಷ್ಠಿಗಳು ನಡೆಯಲಿದ್ದು, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಸಂಪನ್ಮೂಲ ವ್ಯಕ್ತಿಗಳು ವಿಷಯಗಳನ್ನು ಮಂಡಿಸಲಿದ್ದಾರೆ’ ಎಂದರು.
ಖಾಜಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬೆನ್ನಿ ಕುರಿಯಾಕೋಸ್ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೈಯದ್ ಅಬ್ರಾರ್ ವಂದಿಸಿದರು. ಸಮ್ಮೇಳನದ ಸಹ ಸಂಯೋಜಕಿ ಪ್ರೊ.ರೊಮಾನಾ ಮಿರ್ಧೆ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.