
ಕಲಬುರಗಿ: ಇಲ್ಲಿನ ಜಯನಗರ ಅನುಭವ ಮಂಟಪದಲ್ಲಿ ಡಿಸೆಂಬರ್ 13 ಹಾಗೂ 14ರಂದು ಮಹಾದೇವಿಯಕ್ಕಗಳ 15ನೇ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಲಬುರಗಿ ಬಸವ ಸಮಿತಿಯ ಅಧ್ಯಕ್ಷತೆ ವಿಲಾಸವತಿ ಖೂಬಾ ಹೇಳಿದರು.
‘ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಬಸವತತ್ವ ಪ್ರಚಾರಕಿ, ಗೃಹಿಣಿ ಪುಷ್ಪಾ ವಾಲಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಜಯನಗರದ ಅನುಭವ ಮಂಟಪದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಮ್ಮೇಳನದ ಅಂಗವಾಗಿ ನೀಡುವ ‘ಡಾ.ಬಿ.ಡಿ.ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ’ಗೆ ಮಾಜಿ ಸಚಿವೆ, ಉಡುತಡಿಯ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿ.14ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.
ಕಲಬುರಗಿ ಬಸವ ಸಮಿತಿಯ ಉಪಾಧ್ಯಕ್ಷೆ ಜಯಶ್ರೀ ದಂಡೆ ಮಾತನಾಡಿ, ‘ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗದಿಂದ ಈ ವಾರ್ಷಿಕ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಒಟ್ಟು ಐದು ಗೋಷ್ಠಿಗಳು, ಎರಡು ವಿಶೇಷ ಉಪನ್ಯಾಸಗಳು ಇರಲಿವೆ. 19 ಮಂದಿ ವಿಷಯಗಳನ್ನು ಮಂಡಿಸುವರು. ಇಡೀ ಸಮ್ಮೇಳನದಲ್ಲಿ ಎಲ್ಲ ಹಂತದಲ್ಲೂ ಮಹಿಳೆಯರೇ ನಿರ್ವಹಿಸುವುದು ವಿಶೇಷ’ ಎಂದರು.
‘ಎರಡು ದಿನಗಳ ಕಾರ್ಯಕ್ರಮದಲ್ಲಿ ಆರು ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ, ವಚನ ಗಾಯನ, ಶರಣರ ಬಗೆಗಿನ ಜನಪದ ಹಾಡುಗಳ ಗಾಯನದೊಂದಿಗೆ ಬಸವ ಕುರಿತು ಹಾಡಿಗೆ ಯಕ್ಷಗಾಣದ ಹೆಜ್ಜೆ ಹಾಕುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಮೊದಲ ದಿನ ಸಂಜೆ 5 ಗಂಟೆಗೆ ಸೊನ್ನಗಲಿ ಸಿದ್ಧರಾಮ ಕುರಿತ ರೂಪಕ, ಎರಡನೇ ದಿನ ಸಂಎ 6 ಗಂಟೆಗೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆನಂದ ಸಿದ್ದಾಮಣಿ ಇದ್ದರು.
ಡಿಸೆಂಬರ್ 13ರಂದು ಬೆಳಿಗ್ಗೆ 10.30ಕ್ಕೆ ನೆಲೋಗಿಯ ಜನಪದ ಗಾಯಕಿ ನೀಲಮ್ಮ ಎರಡು ದಿನಗಳ ಮಹಾದೇವಿಯಕ್ಕಗಳ ಸಮ್ಮೇಳನ ಉದ್ಘಾಟಿಸುವರುವಿಲಾಸವತಿ ಖೂಬಾ ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ
ಸಮ್ಮೇಳನದ ಅಧ್ಯಕ್ಷರನ್ನಾಗಿ ಪುಷ್ಪಾ ವಾಲಿ ಆಯ್ಕೆಯಾಗಿದ್ದಾರೆ. ಗೃಹಣಿಯಾಗಿದ್ದರೂ ಪುಷ್ಪಾ ಅವರು 25 ವರ್ಷಗಳಿಂದ ಬಸವತತ್ವ ಪ್ರಚಾರದಲ್ಲಿ ತೊಡಗಿದ್ದಾರೆಜಯಶ್ರೀ ದಂಡೆ ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.