
ಕಲಬುರಗಿ: ನಗರ ಹೊರವಲಯದ ವಾಜಪೇಯಿ ಬಡಾವಣೆಯ ಪ್ರಬುದ್ಧ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶಿಷ್ಯವೇತನ ಮತ್ತು ವಸತಿ ಸೌಲಭ್ಯ ನೀಡಬೇಕು ಎಂದು ಜಿಲ್ಲಾ ನಾಗರಿಕ ಹೋರಾಟ ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ ಮತ್ತು ಅಂಬಾರಾಯ ಅಷ್ಠಗಿ ಆಗ್ರಹಿಸಿದರು.
‘ಸರ್ಕಾರ ಸಮಾಜ ಕಲ್ಯಾಣ ಮತ್ತು ಕೆಕೆಆರ್ಡಿಬಿ ಮೂಲಕ 539 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜನವರಿಯಲ್ಲಿ ತರಬೇತಿ ಆರಂಭಿಸಿದೆ. ಆದರೆ, ಅಲ್ಲಿ ವಸತಿ, ಊಟ ಮತ್ತು ಸರಿಯಾದ ಸಾರಿಗೆ ಸೌಲಭ್ಯ ಇಲ್ಲದ ಕಾರಣ 35–40 ಅಭ್ಯರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ. ಪ್ರಬುದ್ಧ ಅಕಾಡೆಮಿ ನಗರಪ್ರದೇಶ ಬಿಟ್ಟು ದೂರದಲ್ಲಿದೆ. ಸುತ್ತಮುತ್ತ ಮನೆ, ವಸತಿ ಸಮುಚ್ಛಯಗಳಿಲ್ಲ. ಕ್ಯಾಂಟೀನ್ ಕೂಡ ಇಂದಿಗೂ ಆರಂಭಿಸಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕೆಇಎ 5–5–2025ರ ಅಧಿಸೂಚನೆಯಂತೆ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಬಡಸಾಮಾನ್ಯ ಅಭ್ಯರ್ಥಿಗಳಿಗೆ ₹10 ಸಾವಿರ ಶಿಷ್ಯವೇತನ ಮತ್ತು ವಸತಿ ಸೌಲಭ್ಯಗಳನ್ನು ನೀಡಬೇಕು. ಆದರೆ, ಜಿಲ್ಲಾಧಿಕಾರಿ ಅವರು ಶಿಷ್ಯವೇತನ ನೀಡುವುದಿಲ್ಲ ಎಂದು 2025ರ ಆಗಸ್ಟ್ 16ರಂದು ಹೊರಡಿಸಿದ ಪ್ರಕಟಣೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದ ವಿವಿಧೆಡೆ ತರಬೇತಿ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಇಲಾಖೆಯು ಶಿಷ್ಯವೇತನ ಅಥವಾ ವಸತಿ ಸೌಲಭ್ಯಕ್ಕಾಗಿ ₹8 ಸಾವಿರ ನೀಡುತ್ತಿದೆ. ಇದು ಸಂತೋಷದ ವಿಷಯ. ಆದರೆ, ಪ್ರಬುದ್ಧ ಅಕಾಡೆಮಿಯ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಬಡಸಾಮಾನ್ಯ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡದಿರುವುದು ಯಾವ ನ್ಯಾಯ? ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು.
‘ತರಬೇತಿ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಮಾತ್ರ ಇರುತ್ತದೆ. ತರಬೇತಿ ಕೂಡ ಒಬ್ಬರೇ ನೀಡುತ್ತಿದ್ದಾರೆ. ಅಲ್ಲಿ ವಸತಿ ಸೌಲಭ್ಯ ಕಲ್ಪಿಸಿ 24X7 ಗ್ರಂಥಾಲಯ ಸೌಲಭ್ಯ ಒದಗಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಎಚ್ಚರಿಸಿದರು.
ಮುಖಂಡರಾದ ಗಿರೀಶ ಭಜಂತ್ರಿ, ಸುಧೀರ ಉಪಾಧ್ಯಾಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.